ADVERTISEMENT

‘ದೇವದಾಸಿಯರಿಗೆ ₹4,500 ಮಾಸಾಶನಕ್ಕೆ ಶಿಫಾರಸು’

ದೇವದಾಸಿ ಎನ್ನುವುದಕ್ಕಿಂತ ‘ನೊಂದ ಮಹಿಳೆ’ ಪದ ಬಳಕೆ ಸೂಕ್ತ: ನ್ಯಾ. ಅರವಿಂದ ಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:16 IST
Last Updated 23 ಫೆಬ್ರುವರಿ 2019, 20:16 IST

ಬಾಗಲಕೋಟೆ: ‘ದೇವದಾಸಿ ಮಹಿಳೆಯರ ಪುನರ್ವಸತಿಗಾಗಿ ಮಾಸಿಕ ₹ 4,500 ಮಾಸಾಶನ ಹಾಗೂ ಐದು ಎಕರೆ ಜಮೀನು ನೀಡುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಹೇಳಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ದೇವದಾಸಿಯರ ರಕ್ಷಣೆ ಮತ್ತು ಪುನರ್ವಸತಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಈಗಿರುವ ಮಾಸಾಶನವನ್ನು ₹3,000ಕ್ಕೆ ಹೆಚ್ಚಿಸುವಂತೆ ಕೋರಿ ದೇವದಾಸಿ ಮಹಿಳೆಯರು ಸಲ್ಲಿಸಿದ ಮನವಿ ಪತ್ರ ಪ್ರಸ್ತಾಪಿಸಿ ಅವರು ಮಾತನಾಡಿದರು.

ದೇವದಾಸಿ ಎಂಬ ಪದಕ್ಕಿಂತ ‘ನೊಂದ ಮಹಿಳೆ’ ಎಂಬ ಪದ ಬಳಕೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟ ಅವರು, ಸಂಬಂಧಪಟ್ಟವರು ಕಾನೂನು ರೂಪಿಸಿ ಅದನ್ನು ಬದಲಾವಣೆ ಮಾಡಬೇಕಿದೆ ಎಂದರು. ಈ ಸಾಮಾಜಿಕ ಪಿಡುಗು ನಿವಾರಣೆಯಾಗುವವರೆಗೆ ಹಾಗೂ ಸರ್ಕಾರದ ಯೋಜನೆಗಳು ಈಗಿರುವ ಎಲ್ಲ ದೇವದಾಸಿ ಮಹಿಳೆಯರಿಗೂ ತಲುಪುವವರೆಗೂ ಕಾನೂನು ಸೇವೆಗಳ ಪ್ರಾಧಿಕಾರ ವಿರಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ರಾಜ್ಯದಲ್ಲಿರುವ ಕೈಗಾರಿಕೆಗಳು ತಮ್ಮ ಲಾಭದಲ್ಲಿನ ಒಂದು ಪಾಲನ್ನು (ಸಿಎಸ್‌ಆರ್‌) ಈ ಪಿಡುಗಿನ ನಿರ್ಮೂಲನೆಗಾಗಿ ಮೀಸಲಿಡಬೇಕು. ಇದನ್ನು ದೇವದಾಸಿಯರ ಪುನರ್ವಸತಿಗಾಗಿ ಬಳಸಿದರೆ ಯಾರ ಮುಂದೆಯೂ ಕೈ ಚಾಚುವ ಅವಶ್ಯಕತೆ ಬರುವುದಿಲ್ಲ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.