ಮಂಗಳೂರು: ‘ರಾಜರಾಜೇಶ್ವರಿ ನಗರದ ಸೋಲಿನ ಅಂತರ ಹಾಗೂ ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಒಂದೇ ರೀತಿ ಫಲಿತಾಂಶ ಬಂದಿರುವುದು ಅನುಮಾನ ಮೂಡಿಸಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ವಿರೋಧಿಸಿ ಕಾಂಗ್ರೆಸ್ ಗುರುವಾರ ಇಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಮತದಾರರು ಹೇಳಿರುವುದು ತಪ್ಪಿದೆಯೇ? ಮತ ಬೀಳುವಲ್ಲಿ ತಪ್ಪಾಗಿದೆಯೇ? ಎಂಬ ಬಗ್ಗೆ ತಜ್ಞರಿಂದ ತನಿಖೆ ನಡೆಸಬೇಕಾಗಿದೆ’ ಎಂದರು.
ಡಿ.ಜೆ.ಹಳ್ಳಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ರಕ್ಷಣೆ ನನ್ನ ಕರ್ತವ್ಯ. ನ್ಯಾಯದ ಬಗ್ಗೆ ಬಿಜೆಪಿಯ ಪಾಠ ಬೇಕಾಗಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಗೃಹಸಚಿವರೋ? ಹಾಗಿದ್ದರೆ, ನನ್ನನ್ನು ಬಂಧಿಸಬಹುದಿತ್ತಲ್ಲ? ನಳಿನ್ ಒಂದು ಸುಳ್ಳಿನ ಕಂತೆ. ಆದರೆ, ನೋಟಿಸ್ ಮೇಲೆ ನೋಟಿಸ್ಗಳನ್ನು ಏಕೆ ಕೊಡುತ್ತಿದ್ದಾರೆ ಎಂಬುದು ನನಗೂ ಗೊತ್ತಿದೆ’ ಎಂದರು.
‘ಮಾನವ ಜೀವನ ಇರುವ ತನಕ ಬಿಜೆಪಿ ಆಡಳಿತವೇ ಇರುತ್ತದೆ. ಕಟೀಲ್ ನೂರು ವರ್ಷ ಬಿಜೆಪಿ ಅಧ್ಯಕ್ಷರಾಗಿರಲಿ. ಅವರೇ ಹತ್ತು ವರ್ಷಕ್ಕೆ ಸೀಮಿತ ಮಾಡುವುದು ಬೇಡ. ಬಂಡೆ ಒಡೆದು ಹೋಗಿದ್ದರೆ ಚಪ್ಪಡಿ, ಜಲ್ಲಿ ಹಾಕಲು ಒಳ್ಳೆ ಕೆಲಸಕ್ಕೆ ಬಳಸಲಿ’ ಎಂದು ಟಾಂಗ್ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.