ADVERTISEMENT

ಬೆತ್ತಲೆ ಮೆರವಣಿಗೆ: ಎಎಸ್‌ಐ, ಚಾಲಕ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:15 IST
Last Updated 13 ಜೂನ್ 2019, 20:15 IST
   

ಚಾಮರಾಜನಗರ: ಕಬ್ಬೆಕಟ್ಟೆ ಶನೇಶ್ವರ ದೇವಾಲಯದ ಆವರಣದಲ್ಲಿ ನಡೆದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಗುಂಡ್ಲುಪೇಟೆ ಪೊಲೀಸ್‌ ಠಾಣೆ ಎಎಸ್‌ಐ ಮತ್ತು ಹೈವೇ ಪಾಟ್ರೋಲ್‌ ಉಸ್ತುವಾರಿ ಸಿ.ರಾಜೇಂದ್ರ ಪ್ರಸಾದ್‌ ಮತ್ತು ವಾಹನ ಚಾಲಕ ಶ್ರಿನಿವಾಸ (ಎಎಸ್‌ಸಿ–111, ಡಿಎಆರ್‌) ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ. ಹಲ್ಲೆಗೊಳಗಾದ ಸಂತ್ರಸ್ತ ಪ್ರತಾಪ್‌ ಅವರನ್ನು ಶನೇಶ್ವರ ದೇವಸ್ಥಾನದ ಆವರಣದಿಂದ ಠಾಣೆಗೆ ಹೈವೇ ಪಾಟ್ರೋಲ್‌ ವಾಹನದಲ್ಲಿ ಕರೆದುಕೊಂಡು ಬರಲಾಗಿತ್ತು.

ಪ್ರತಾಪ್‌ ಅವರನ್ನು ವಾಹನದ ಬಳಿಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಶ್ರೀನಿವಾಸ ಅವರು ಕಾಲಿನಲ್ಲಿ ಒದೆಯುತ್ತಿರುವುದು ಮತ್ತು ಹೊಡೆಯಲು ಯತ್ನಿಸುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಹೈವೇ ಪಾಟ್ರೋಲ್‌ ಉಸ್ತುವಾರಿಯಾಗಿದ್ದು ಕೊಂಡು ರಾಜೇಂದ್ರ ಪ್ರಸಾದ್‌ ಅವರು ಪ್ರತಾಪ್‌ ಅವರನ್ನು ಸುರಕ್ಷಿತವಾಗಿ ಠಾಣೆಗೆ ಕರೆದುಕೊಂಡು ಹೋಗದೇ ಅರೆಬೆತ್ತಲೆಯಾಗಿ ಕರೆತರುವ ಮೂಲಕ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿ ಇಲಾಖೆಯ ಘನತೆಗೆ ಕುಂದು ಉಂಟು ಮಾಡಿದ್ದಾರೆ. ಅಶಿಸ್ತು ಪ್ರದರ್ಶಿಸಿರುವ ಕಾರಣದಿಂದ ಇಲಾಖೆ ವಿಚಾರಣೆಯ ಸೇವೆಯನ್ನು ಕಾದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್‌ಪಿ ಅವರು ಆದೇಶದಲ್ಲಿ ಹೇಳಿದ್ದಾರೆ.

ಶ್ರೀನಿವಾಸ ಅವರು ಬೂಟು ಕಾಲಿನಲ್ಲಿ ಒದೆಯುವ ಮೂಲಕ ಶಿಸ್ತಿನ ಇಲಾಖೆಯ ಘನತೆಗೆ ಧಕ್ಕೆ ತಂದಿದ್ದಾರೆ. ಕರ್ತವ್ಯದ ನಡುವೆ ಅಶಿಸ್ತು ಮತ್ತು ದುರ್ನಡತೆ ತೋರಿದ್ದಕ್ಕಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.