ಗದಗ: ‘ಕೆಲವರಿಗೆ ಬಣ್ಣಗಳ ಬಗ್ಗೆ ಅಲರ್ಜಿ ಇದೆ. ಅವರ ಪಕ್ಷದ ಧ್ವಜದಲ್ಲೂ ಕೇಸರಿ ಇದೆ. ಅದನ್ನೂ ತೆಗೆದು ಧ್ವಜ ಪೂರ್ತಿ ಹಸಿರು ಮಾಡಿಕೊಳ್ಳಲಿ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಲೇವಡಿ ಮಾಡಿದರು.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ವಿವೇಕ ಶಾಲೆ’ಗಳ ಗೋಡೆಗಳಿಗೆ ಕೇಸರಿ ಬಣ್ಣ ಹಚ್ಚುವ ವಿಷಯಕ್ಕೆ ಸಂಬಂಧಿಸಿದಂತೆ ಮೇಲಿನಂತೆ ಪ್ರತಿಕ್ರಿಯಿಸಿದರು.
‘ಕೇಸರಿ ಕೂಡ ಬಣ್ಣವಲ್ಲವೇ? ಆ ಬಣ್ಣ ಚೆನ್ನಾಗಿರುತ್ತದೆ ಅಂತ ಆರ್ಕಿಟೆಕ್ಟ್ ಹೇಳಿದರೆ ಶಾಲೆ ಗೋಡೆಗಳಿಗೆ ಕೇಸರಿ ಬಣ್ಣವನ್ನೇ ಬಳಿಸಲಾಗುವುದು. ಬಣ್ಣ, ಕಿಟಕಿ, ಬಾಗಿಲುಗಳ ವಿನ್ಯಾಸದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ’ ಎಂದರು.
ಟಿಪ್ಪು ಪ್ರತಿಮೆ ನಿರ್ಮಾಣ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ‘ತನ್ವೀರ್ ಸೇಠ್ ಮೈಸೂರಿನಲ್ಲಿ ಪ್ರತಿಮೆ ಸ್ಥಾಪನೆಗೆ ಹೊರಟರೆ ಮುಂದೇನು ಮಾಡಬೇಕು ಎಂದು ಜನರೇ ನಿರ್ಧರಿಸುತ್ತಾರೆ’ ಎಂದರು.
‘ಟಿಪ್ಪು ಶ್ರೀರಂಗಪಟ್ಟಣದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಅಂತ ಗೊತ್ತಾಯಿತು. ಪಹಣಿ, ಶಿರಸ್ತೇದಾರ್ ಕನ್ನಡ ಪದಗಳು ಅಂತ ಅಂದುಕೊಂಡಿದ್ದೆವು. ಆದರೆ, ಟಿಪ್ಪು ಕನ್ನಡ ಕೊಂದಿದ್ದ ಎಂದು ಈಗ ಗೊತ್ತಾಗುತ್ತಿದೆ. ಕೂರ್ಗ್, ಕೇರಳದಲ್ಲಿ ಟಿಪ್ಪು ಬಲವಂತವಾಗಿ ಹಿಂದೂಗಳನ್ನು ಮತಾಂತರ ಮಾಡಿದ. ಒಪ್ಪದವರನ್ನು ಕೊಂದ ಎಂಬ ವಿಚಾರಗಳು ಟಿಪ್ಪು ಬರೆದಿರುವ ಪತ್ರಗಳಿಂದಲೇ ಗೊತ್ತಾಗುತ್ತಿದೆ’ ಎಂದು ಅವರು ಕಿಡಿಕಾರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.