ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಆಪ್ತ ಸಹಾಯಕ ಎಚ್.ಜೆ. ರಮೇಶ್ ಅವರು ಸೋಮವಾರ ಬೆಳಿಗ್ಗೆ ಕೋವಿಡ್ನಿಂದನಿಧನರಾಗಿದ್ದಾರೆ.
ರಮೇಶ್ ಅವರಿಗೆ ಏ. 13ರಂದು ಕೋವಿಡ್ ದೃಢಪಟ್ಟಿತ್ತು. ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಕಾರಣ, ಸೋಮವಾರ ಬೆಳಿಗ್ಗೆ 9.30ಕ್ಕೆ ಸಾವು ಸಂಭವಿಸಿದೆ..
‘ರಮೇಶ್ ಅವರು ಸಚಿವರ ಮನೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ರಮೇಶ್ ಅವರಿಗೆ ಉಸಿರಾಟ ಸಮಸ್ಯೆ ಎದುರಾದಾಗ, ತಕ್ಷಣ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಸಿಗಲಿಲ್ಲ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದೆ. ಸಚಿವರ ಆಪ್ತ ಸಹಾಯಕರಿಗೇ ಆಕ್ಸಿಜನ್ ಸಿಗಲಿಲ್ಲ ಎಂದ ಮೇಲೆ ಜನಸಾಮಾನ್ಯರ ಸ್ಥಿತಿ ಏನು’ ಎಂದು ರಮೇಶ್ ಅವರ ಒಡನಾಡಿಯೊಬ್ಬರು ತಿಳಿಸಿದರು.
ರಮೇಶ್ ಸಾವಿನ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಸುರೇಶ್ಕುಮಾರ್, ‘ನಮ್ಮ ಕ್ಷೇತ್ರದ (ರಾಜಾಜಿನಗರ) ಅನೇಕರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಉಳಿಸಿದ್ದ, ನನ್ನ ಆಪ್ತ ಸಹಾಯಕ ಎಚ್.ಜೆ. ರಮೇಶ್ ಇನ್ನಿಲ್ಲ. ರಮೇಶ್ ಸುಮಾರು ಎಂಟು ವರ್ಷ ನನ್ನೊಡನೆ ನಗು ನಗುತ್ತಾ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರಕಲಿ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.