ADVERTISEMENT

ವಿದೇಶಕ್ಕೆ ಹೋದರೂ 'ಮೋದಿ' ದ್ವೇಷ ಬಿಡದ ರಾಹುಲ್: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 16:28 IST
Last Updated 1 ಜೂನ್ 2023, 16:28 IST
ಸಿ.ಟಿ.ರವಿ ಮತ್ತು ರಾಹುಲ್ ಗಾಂಧಿ
ಸಿ.ಟಿ.ರವಿ ಮತ್ತು ರಾಹುಲ್ ಗಾಂಧಿ   

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿದೇಶಕ್ಕೆ ಹೋಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದ್ವೇಷವನ್ನು ಬಿಟ್ಟಿಲ್ಲ. ಅಸಹಿಷ್ಣುತೆಯ ವಿಷ, ಅಸಹನೆ ಅವರಲ್ಲಿ ಮನೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ  ಮಾತನಾಡಿದ ಅವರು, ‘ಮಹಾಭಾರತದಲ್ಲಿ ಪಾಂಡವರು ಇಂದ್ರಪ್ರಸ್ಥ ನಿರ್ಮಿಸುತ್ತಾರೆ. ಅದನ್ನು ನೋಡಿ ಸಂತಸಪಡುವ ಬದಲು ಕೌರವರು ಸಂಕಟಪಡುತ್ತಾರೆ. ಈಗ ಹೊಸ ಸಂಸತ್ ಭವನ ನೋಡಿ ಕಾಂಗ್ರೆಸ್ಸಿಗರಿಗೆ ಮತ್ತು ವಿರೋಧ ಪಕ್ಷಗಳಿಗೂ ಸಂಕಟವಾಗಿದೆ. ಮೋದಿ ಸರ್ಕಾರ ಹೊಸ ಸಂಸತ್‌ ನಿರ್ಮಿಸಿರುವುದೇ ಇವರ ಹೊಟ್ಟೆಯುರಿಗೆ ಕಾರಣ. ಹೀಗಾಗಿ ಅವರು ಇಲ್ಲ ಸಲ್ಲದ ವಿಚಾರ ಪ್ರಸ್ತಾಪಿಸಿ ಅಡ್ಡಿಪಡಿಸಿದರು’ ಎಂದು ರವಿ ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆಗೆ ಕರೆಯಿಸಬೇಕಿತ್ತು ಎಂದು ಪ್ರಸ್ತಾಪಿಸಿದರು. ಇವರಿಗೆ ಕಾಳಜಿ ಇದ್ದಿದ್ದರೆ ಮುರ್ಮು ವಿರುದ್ಧ ಯಶವಂತ ಸಿನ್ಹಾ ಅವರನ್ನು ಕಣಕ್ಕಿಳಿಸುತ್ತಿರಲಿಲ್ಲ. ರಾಷ್ಟ್ರಪತ್ನಿ ಎಂದು ಕರೆದು ಅವಮಾನ ಮಾಡಿದ್ದರು ಎಂದು ಹರಿಹಾಯ್ದರು.

ADVERTISEMENT

ಕಾರ್ಲ್‌ ಮಾರ್ಕ್ಸ್‌ ಮತ್ತು ಮೆಕಾಲೆ ಗರಡಿಯಲ್ಲಿ ಪಳಗಿದ ಭಾರತೀಯ ವ್ಯಕ್ತಿಗಳಿಗೆ ಭಾರತದ ಮುನ್ನಡೆ ಬೇಕಾಗಿಲ್ಲ. ದೇಶದ ಅಭಿವೃದ್ಧಿ ಇವರಿಗೆ ಸಹಿಸಲು ಆಗುತ್ತಿಲ್ಲ. ಮೆಕಾಲೆಗೆ ಭಾರತ ಸದಾ ಗುಲಾಮಗಿರಿಯಲ್ಲಿ ಇರಬೇಕು ಎಂಬ ಭಾವನೆ ಇತ್ತು. ಅದಕ್ಕಾಗಿ ದಾಸ್ಯವನ್ನು ಒಪ್ಪಿಕೊಳ್ಳುವ ಜನರನ್ನು ಮೆಕಾಲೆ ತಯಾರಿಸಿದರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.