ಬೆಂಗಳೂರು: ‘ಚುನಾವಣಾ ಆಯೋಗಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ಸೋಮವಾರ ದೂರು ಸಲ್ಲಿಸಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಅವರು ಕೆ.ಆರ್. ವೃತ್ತದ ಬಳಿ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿದರು.
ಬಳಿಕ ಮಾತನಾಡಿದ ರಮೇಶ್ ಬಾಬು, ‘ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ರಮೇಶ ಜಾರಕಿಹೊಳಿ ಅಪೂರ್ಣ ಮಾಹಿತಿ ನೀಡಿದ್ದಾರೆ. ಸೌಭಾಗ್ಯ ಶುಗರ್ ಕಂಪನಿ ಸೇರಿ ಬೇರೆ ಬೇರೆ ಕಂಪನಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಅವರು ಕೊಟ್ಟಿಲ್ಲ. ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಇರುವ ದಾಖಲೆಗಳನ್ನೂ ಕೊಟ್ಟಿಲ್ಲ’ ಎಂದು ದೂರಿದರು.
ಎಂ. ಲಕ್ಷಣ್ ಮಾತನಾಡಿ, ‘ಇಬ್ಬರು ಮಕ್ಕಳು ಸೇರಿ ಮೂವರ ಹೆಸರಿನಲ್ಲಿ ಸೌಭಾಗ್ಯ ಶುಗರ್ ಕಂಪನಿ ಮೂಲಕ ಒಂಬತ್ತು ಬ್ಯಾಂಕ್ಗಳಲ್ಲಿ ರಮೇಶ ಜಾರಕಿಹೊಳಿ ₹ 578 ಕೋಟಿ ಸಾಲ ಪಡೆದಿದ್ದಾರೆ. ಈ ಕಂಪನಿ ದಿವಾಳಿ ಎಂದು ಘೋಷಣೆ ಮಾಡಿದ್ದರೂ ಬೇನಾಮಿ ಹೆಸರಲ್ಲಿ ನಡೆಯುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.