
ನವದೆಹಲಿ: ಅನ್ನದಾತ ರೈತರ ಕಲ್ಯಾಣಕ್ಕಾಗಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಲೋಕಸಭೆಯಲ್ಲಿ ಎರಡು ಖಾಸಗಿ ಮಸೂದೆಗಳನ್ನು ಶುಕ್ರವಾರ ಮಂಡಿಸಿದರು. ಈ ಮಸೂದೆಗಳು ಕೃಷಿ ಆರ್ಥಿಕತೆ ಹಾಗೂ ಗ್ರಾಮೀಣ ಕುಟುಂಬಗಳ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಅವರು ಹೇಳಿದರು.
ಹೈನುಗಾರರ (ಕಲ್ಯಾಣ) ಮಸೂದೆಯು ದೇಶದ 7 ಕೋಟಿ ಡೇರಿ ಆಧಾರಿತ ಕೃಷಿ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯ ನೆರವು ನೀಡುತ್ತದೆ. ಈ ಕುಟುಂಬಗಳಲ್ಲಿ ಹೆಚ್ಚಿನವರು ಸಣ್ಣ, ಅತಿ ಸಣ್ಣ ರೈತರು ಮತ್ತು ಮಹಿಳೆಯರಿದ್ದಾರೆ. ತಜ್ಞರು ಮತ್ತು ರೈತ ಪ್ರತಿನಿಧಿಗಳನ್ನು ಒಳಗೊಂಡ ಡೇರಿ ರೈತರ ಕಲ್ಯಾಣ ಸಮಿತಿಯ ರಚನೆ ಮಾಡಬೇಕು. ಡೇರಿ ರೈತರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಡೇರಿ ರೈತರಿಗೆ ತಲಾ ₹50 ಲಕ್ಷ ಅಪಘಾತ ವಿಮೆ ನೀಡಬೇಕು. ಡೇರಿ ರೈತರಿಗೆ ತಲಾ ₹10 ಲಕ್ಷ ಆರೋಗ್ಯ ವಿಮೆ ಒದಗಿಸಬೇಕು. ಸರ್ಕಾರಿ ಯೋಜನೆಗಳಡಿ ಖರೀದಿಸಿದ ಜಾನುವಾರುಗಳಿಗೆ ಉಚಿತ ವಿಮೆ ನೀಡಬೇಕು. ಡೇರಿ ರೈತರಿಗೆ ಮಾಸಿಕ ಪಿಂಚಣಿ ಕೊಡಬೇಕು. ಈ ಮಸೂದೆ ಅನುಷ್ಠಾನಕ್ಕೆ ವಾರ್ಷಿಕ ₹10 ಸಾವಿರ ಕೋಟಿ ವೆಚ್ಚ ಆಗಲಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಪುಷ್ಪಕೃಷಿ ಮಂಡಳಿ ಮಸೂದೆಯು ಭಾರತದ ಹೂವಿನ ಕೃಷಿ ಕ್ಷೇತ್ರ ಅಭಿವೃದ್ಧಿಪಡಿಸಲು ಈ ಮಸೂದೆ ನೆರವಾಗುತ್ತದೆ. ಹೆಚ್ಚಿನ ಮೌಲ್ಯದ ಹೂವು ಉತ್ಪಾದನೆ ಮತ್ತು ರಫ್ತು ಹೆಚ್ಚಿಸಿ ದೇಶವನ್ನು ಹೂ ಮಾರುಕಟ್ಟೆಯ ಜಾಗತಿಕ ಕೇಂದ್ರವಾಗಿ ಮಾಡಲು ಇದು ಉತ್ತೇಜನ ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ರಾಷ್ಟ್ರೀಯ ಪುಷ್ಪಕೃಷಿ ಮಂಡಳಿ ರಚಿಸಬೇಕು. ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಪ್ರಧಾನ ಕಚೇರಿ ಹಾಗೂ ದೇಶದ ವಿವಿಧೆಡೆ ಪ್ರಾದೇಶಿಕ ಕಚೇರಿಗಳು ಇರಬೇಕು. ವೈಜ್ಞಾನಿಕ ಕೃಷಿಗೆ ಒತ್ತು ನೀಡಬೇಕು. ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅಭಿವೃದ್ಧಿ ಮಾಡಬೇಕು. ಇದಕ್ಕೆ ವಾರ್ಷಿಕ ₹1,500 ಕೋಟಿ ಬೇಕಾಗುತ್ತದೆ ಎಂದು ಅವರು ತಿಳಿಸಿದರು.
ದೇಶವು ಈಗಾಗಲೇ ₹717.83 ಕೋಟಿ ಮೌಲ್ಯದ ಸುಮಾರು 19,677 ಟನ್ ಪುಷ್ಪ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಈ ಮಸೂದೆಯು ಉತ್ಪಾದನಾ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.