ಬೆಂಗಳೂರು: ಆರೋಗ್ಯ ಸಚಿವ ಸಚಿವ ಡಾ.ಕೆ.ಸುಧಾಕರ್ ಅವರ ಗನ್ಮ್ಯಾನ್ ಮತ್ತು ಚಾಲಕ ಹೊಡೆದಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಸದಾಶಿವನಗರದಲ್ಲಿರುವ ಸಚಿವರ ಮನೆ ಎದುರಿನ ನಡುರಸ್ತೆಯಲ್ಲಿ ಗನ್ಮ್ಯಾನ್ ತಿಮ್ಮಯ್ಯ ಮತ್ತು ಚಾಲಕ ಸೋಮಶೇಖರ್ ಉರುಳಾಡಿಕೊಂಡು, ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಗನ್ಮ್ಯಾನ್ ತಿಮ್ಮಯ್ಯ ಅವರು ಗುರುವಾರ ಅಂಗವಿಕಲನೊಬ್ಬನಿಗೆ ಹೊಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಸಚಿವ ಸುಧಾಕರ್ ಅವರಿಗೆ ಈ ವಿಷಯವನ್ನು ಸೋಮಶೇಖರ್ ತಿಳಿಸಿದ್ದಾರೆ ಎಂದು ಆಕ್ರೋಶಗೊಂಡು ತಿಮ್ಮಯ್ಯ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
‘ಚಾ ಮಾರುವ ಅಂಗವಿಕಲನೊಬ್ಬನ ಮೇಲೆ ತಿಮ್ಮಯ್ಯ ಗುರುವಾರ ಹಲ್ಲೆ ನಡೆಸಿದ್ದಾನೆ. ಹೀಗಾಗಿ, ನಾವು ಎಲ್ಲರೂ ಆತನ ಮೇಲೆ ಬೇಸರ ವ್ಯಕ್ತಪಡಿಸಿದ್ದೆವು. ಆದರೆ, ಈ ವಿಷಯವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಆದರೂ, ಸಚಿವರಿಗೆ ಈ ವಿಷಯ ತಿಳಿಸಿದ್ದೇನೆಂಬ ಅನುಮಾನ ಮತ್ತು ಭಯದಿಂದ ನನ್ನ ಮೇಲೆ ತಿಮ್ಮಯ್ಯ ಹಲ್ಲೆ ನಡೆಸಿದ್ದಾರೆ’ ಎಂದು ಸೋಮಶೇಖರ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.