ಉಡುಪಿ: ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ಸಾಂತ್ವನ ಹೇಳಲು ಬುಧವಾರ ಮಲ್ಪೆಗೆ ಬಂದಿದ್ದ ಮೀನುಗಾರಿಕಾ ಸಚಿವರ ವಿರುದ್ಧ ಮೀನುಗಾರರು ಹಾಗೂ ಸ್ಥಳೀಯರು ಹರಿಹಾಯ್ದರು.
‘7 ಮಂದಿ ಮೀನುಗಾರರು ನಾಪತ್ತೆಯಾಗಿ 25 ದಿನಗಳು ಕಳೆದಿವೆ. ಮೀನುಗಾರರ ಕುಟುಂಬಗಳು ಆತಂಕದಲ್ಲಿವೆ. ಇಷ್ಟಾದರೂ ಜಿಲ್ಲೆಗೆ ಭೇಟಿನೀಡಲು ನಿಮಗೆ ಸಮಯ ಇರಲಿಲ್ಲವೇ? ಕಡಲ ಮಕ್ಕಳ ಕಷ್ಟಸುಖ ವಿಚಾರಿಸುವುದು ನಿಮ್ಮ ಕರ್ತವ್ಯವಲ್ಲವೇ’ ಎಂದು ತರಾಟೆಗೆ ತೆಗೆದುಕೊಂಡರು.
‘ಇಲ್ಲಿಗೆ ಗೃಹ ಸಚಿವರು ಬಂದಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದಾರೆ. ಮೀನುಗಾರಿಕಾ ಸಚಿವರಾದ ನೀವು ಮಾತ್ರ ಬಂದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಕ್ರೋಶಭರಿತ ಮೀನುಗಾರರನ್ನು ಸಮಾಧನಪಡಿಸಲು ಯತ್ನಿಸಿದ ಸಚಿವರು, ‘ಪೊಲೀಸರು, ನೌಕಾಪಡೆ ಅಧಿಕಾರಿಗಳು ಮೀನುಗಾರರ ಪತ್ತೆ ಮಾಡುತ್ತಿದ್ದಾರೆ. ಸಮುದ್ರದ ಒಳಗೆ ಹಾಗೂ ಹೊರಗೆ ಕಾರ್ಯಾಚರಣೆ ನಡೆಯುತ್ತಿದೆ. ಇಸ್ರೋ ಸ್ಯಾಟಲೈಟ್ ನೆರವು ಪಡೆಯಲು ನಿರ್ಧರಿಸಲಾಗಿದೆ. ನಾಪತ್ತೆಯಾದ ದಿನದಿಂದಲೂ ಶೋಧ ನಡೆಯುತ್ತಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿಲ್ಲ ಎಂದು ಸಮಜಾಯಿಷಿ ನೀಡಿದರು.
ಜತೆಗೆ, ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಮುಖ್ಯಮಂತ್ರಿ ತಾತ್ಕಾಲಿಕವಾಗಿ ₹ 1 ಲಕ್ಷ ಪರಿಹಾರ ಘೋಷಿಸಿದ್ದಾರೆ. ನಾಳೆಯೇ ಪರಿಹಾರ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯರು, ‘ನಿಮ್ಮ ಪರಿಹಾರ ಯಾರಿಗೆ ಬೇಕು? ಮೊದಲು ಕಣ್ಮರೆಯಾದವರನ್ನು ಹುಡುಕಿಕೊಡಿ. ಮೀನುಗಾರರೆಲ್ಲ ಸೇರಿ ಸರ್ಕಾರಕ್ಕೆ ₹ 5 ಲಕ್ಷ ಪರಿಹಾರ ಕೊಡುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.