ADVERTISEMENT

ಅಗತ್ಯ ಬಿದ್ದರೆ ವಾರಿಸ್‌ ಪಠಾಣ್‌ ವಿಚಾರಣೆ : ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:46 IST
Last Updated 22 ಫೆಬ್ರುವರಿ 2020, 11:46 IST
ವಾರಿಸ್‌ ಯೂಸೂಫ್‌ ಪಠಾಣ್‌
ವಾರಿಸ್‌ ಯೂಸೂಫ್‌ ಪಠಾಣ್‌   

ಕಲಬುರ್ಗಿ: ನಗರದಲ್ಲಿ ಈಚೆಗೆ ನಡೆದ ಆಲ್‌ ಇಂಡಿಯಾ ಮಜ್ಲಿಸ್‌– ಎ– ಇತ್ತಹಾದುಲ್‌ ಮುಸ್ಲಿಮಿನ್‌ (ಎಂಐಎಂಐಎಂ) ಪಕ್ಷದ ಸಮಾವೇಶದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆಪಕ್ಷದ ರಾಷ್ಟ್ರೀಯ ವಕ್ತಾರ, ಮಹಾರಾಷ್ಟ್ರದ ಮಾಜಿ ಶಾಸಕ ವಾರಿಸ್‌ ಯೂಸೂಫ್‌ ಪಠಾಣ್‌ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಗರದ ಪೀರ್‌ ಬಂಗಾಲಿ ಮೈದಾನದಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಫೆ.15ರಂದು ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಕೋಮುದ್ವೇಷದ ಹೇಳಿಕೆ ನೀಡಿದ್ದಾರೆ ಎಂದು ನಗರದ ವಕೀಲರಾದ ಶ್ವೇತಾ ಸಿಂಗ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಕಲಂ 117, 153 ಹಾಗೂ 153ಎ ಅಡಿ ಶುಕ್ರವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ.

‘ಈಗ ನಮ್ಮ ಸಿಂಹಿಣಿಯರು ಮಾತ್ರ ಹೊರಗೆ ಬಂದಿದ್ದಾರೆ. ಅಷ್ಟಕ್ಕೇ ‘ಅವರಿಗೆ’ ಬೆವರು ಬರುತ್ತಿದೆ. ನಾವೆಲ್ಲರೂ ಬಂದು ನಿಂತರೆ ‘ಅವರ’ ಕಥೆ ಏನು? ನಾವು ಕೇವಲ 15 ಕೋಟಿ ಮಾತ್ರ ಇದ್ದೇವೆ. ಆದರೆ, 100 ಕೋಟಿ ಇರುವ ‘ನೀವು’ ಅನುಭವಿಸಬೇಕಾಗುತ್ತದೆ, ನೆನಪಿಟ್ಟುಕೊಳ್ಳಿ’ ಎಂದು ಎಚ್ಚರಿಕೆ ನೀಡುವ ರೀತಿಯಲ್ಲಿ ಪಠಾಣ್‌ ಭಾಷಣ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರ ಭಾಷಣದವಿಡಿಯೊ ಕೂಡ ಈಗ ವೈರಲ್‌ ಆಗಿದೆ.

ADVERTISEMENT

‘ಅಕ್ರಮ ಕೂಟ ರಚನೆ, ವರ್ಗಗಳ ಮಧ್ಯೆ ದ್ವೇಷ ಹುಟ್ಟಿಸುವ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಪಠಾಣ್‌ಗೆ ಶನಿವಾರ ನೋಟಿಸ್‌ ಕಳಿಸಲಾಗಿದೆ.ಅಗತ್ಯಬಿದ್ದರೆ ಅವರನ್ನು ವಿಚಾರಣೆಗೂ ಕರೆಸಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ತಿಳಿಸಿದ್ದಾರೆ.

ಗೃಹ ಸಚಿವರ ಪ್ರತಿಕ್ರಿಯೆ: ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಪಠಾಣ್‌ ಮಾತನಾಡಿರುವುದು ಕೋಮುಭಾವನೆಗೆ ಧಕ್ಕೆ ತರುವ ರೀತಿಯಲ್ಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.