ADVERTISEMENT

ವಿಜಯಪುರ: ಡೋಣಿ ನದಿಯಲ್ಲಿ ಪ್ರವಾಹ; ಮುಳುಗಿದ ಸೇತುವೆ

ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳಿಗೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 16:28 IST
Last Updated 29 ಜೂನ್ 2020, 16:28 IST
ದೋಣಿ ನದಿ ತುಂಬಿ ಹರಿಯುತ್ತಿರುವುದು
ದೋಣಿ ನದಿ ತುಂಬಿ ಹರಿಯುತ್ತಿರುವುದು   
""

ವಿಜಯಪುರ: ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಬಿರುಸಿನ ಮಳೆಯಾದ ಪರಿಣಾಮ ಡೋಣಿ ನದಿ ಹಾಗೂ ಸೋಗಲಿ ಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು.

ಡೋಣಿ ನದಿ ಉಕ್ಕಿ ಹರಿದ ಪರಿಣಾಮ ತಾಳಿಕೋಟೆ–ಹಡಗಿನಾಳ ಸಂಪರ್ಕಿಸುವ ನೆಲಮಟ್ಟದ ಸೇತುವೆ ಮುಳುಗಿದ್ದರಿಂದ ಜನ, ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಅಪಾಯವನ್ನು ಲೆಕ್ಕಿಸದೇ ಹಡಗಿನಾಳ ಗ್ರಾಮಸ್ಥರು ಕೈ ಕೈ ಹಿಡಿದು, ನದಿ ದಾಟಿ ತಾಳಿಕೋಟೆಗೆ ಬಂದರು. ಮಧ್ಯಾಹ್ನದ ಬಳಿಕ ಪ್ರವಾಹ ಇಳಿಮುಖವಾಯಿತು.

ADVERTISEMENT

ಸೋಗಲಿ ಹಳ್ಳ ತುಂಬಿ ಹರಿದ ಪರಿಣಾಮ ಕೂಚಬಾಳ, ಬಾವೂರ, ಮೂಕಿಹಾಳ, ಕಲ್ಲದೇವನಹಳ್ಳಿ, ಹಡಗಿನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ವಾರದ ಹಿಂದೆ ಬಿತ್ತನೆಯಾಗಿರುವ ತೊಗರಿ ಹೊಲಗಳು ಜಲಾವೃತವಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಪರೀಕ್ಷಾರ್ಥಿಗಳಿಗೆ ಅಡಚಣೆ:

ತಾಳಿಕೋಟೆ ತಾಲ್ಲೂಕಿನ ಹಡಗಿನಾಳ ಗ್ರಾಮದ ಮೂವರು ವಿದ್ಯಾರ್ಥಿಗಳು ಮೈಲೇಶ್ವರದ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಪರೀಕ್ಷೆ ಬರೆದು ಊರಿಗೆ ಮರಳುವ ವೇಳೆ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿ ಸೇತುವೆ ಮುಳುಗಿದ ಕಾರಣ ಪೋಷಕರ ನೆರವಿನೊಂದಿಗೆ ಸುರಕ್ಷಿತವಾಗಿ ದಾಟಿದರು.

ನಾಲತವಾಡದ ಹಟ್ಟಿ ಹಳ್ಳ ಮತ್ತು ವಾರದೈನ ಕೆರೆಯು ಉಕ್ಕಿ ಹರಿದ ಪರಿಣಾಮ ಗ್ರಾಮದ ಹೊಲದ ಮನೆಯಲ್ಲಿದ್ದ ಮನೆಗಳು ಜಲಾವೃತವಾದವು. ನೀರಿನಲ್ಲಿ ಸಿಲುಕಿಕೊಂಡಿದ್ದ ಎಸ್ಎಸ್ಎಲ್‌ಸಿ ಪರೀಕ್ಷಾರ್ಥಿ ಅರ್ಷದ್ ಮೂಲೇಘರ್‌ ಮತ್ತು ಕುಟುಂಬದವರು ನೆರೆಹೊರೆಯವರ ಸಹಕಾರದಿಂದ ಸುರಕ್ಷಿತವಾಗಿ ಗ್ರಾಮಕ್ಕೆ ಮರಳಿದರು. ಬಳಿಕ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದನು.

ವಿಜಯಪುರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲೂ ಭಾನುವಾರ ರಾತ್ರಿ ಉತ್ತಮ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.