ADVERTISEMENT

ಮಾನವ–ಪ್ರಾಣಿ ಸಂಘರ್ಷ ತಡೆಗೆ ‘ಗಾಂಧಿಗಿರಿ’

ಅರಣ್ಯದ ಖಾಲಿ ಜಾಗದಲ್ಲಿ ಹಣ್ಣಿನ ಗಿಡ ನೆಟ್ಟ ಪರಿಸರ ಪ್ರಿಯರು

ಕೋಡಿಬೆಟ್ಟು ರಾಜಲಕ್ಷ್ಮಿ
Published 2 ಆಗಸ್ಟ್ 2018, 19:30 IST
Last Updated 2 ಆಗಸ್ಟ್ 2018, 19:30 IST
ಹಣ್ಣಿನ ಗಿಡಗಳನ್ನು ಹೊತ್ತು ಕಾಡಿನತ್ತ ಸಾಗಿದ ವಿದ್ಯಾರ್ಥಿಗಳು
ಹಣ್ಣಿನ ಗಿಡಗಳನ್ನು ಹೊತ್ತು ಕಾಡಿನತ್ತ ಸಾಗಿದ ವಿದ್ಯಾರ್ಥಿಗಳು   

ಮಂಗಳೂರು: ಮಾನವ–ಪ್ರಾಣಿ ಸಂಘರ್ಷ ಮಲೆನಾಡು, ಅರೆಮಲೆನಾಡು ಪ್ರದೇಶದ ನಿತ್ಯ ಸಂಕಟ. ಇದನ್ನು ನಿವಾರಿಸಲು ಹಣ್ಣಿನ ಗಿಡಗಳನ್ನು ನೆಡುವ ‘ಗಾಂಧಿಗಿರಿ’ ಪಶ್ಚಿಮ ಘಟ್ಟದ ತಪ್ಪಲಲ್ಲಿ ನಡೆದಿದೆ.

ಕಾಡಿನ ಹಣ್ಣುಗಳನ್ನು ತಿಂದ ಕೋತಿ ನಮ್ಮ ತೋಟಗಳಲ್ಲಿ ಬೆಳೆದ ಬಾಳೆಹಣ್ಣು ತಿನ್ನುವುದಿಲ್ಲ, ಎಳನೀರು ಕುಡಿಯುವುದಿಲ್ಲ ಎಂಬ ನಂಬಿಕೆಯ ಬೆನ್ನು ಹತ್ತಿದವರು ರಾಷ್ಟ್ರೀಯ ಪರಿಸರ ಸಂರಕ್ಷಣಾ ವೇದಿಕೆಯವರು. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದ ಖಾಲಿ ಜಾಗಗಳಲ್ಲಿ ಹಣ್ಣಿನ ಗಿಡಗಳನ್ನು ಅವರು ನೆಟ್ಟಿದ್ದಾರೆ. ಗಿಡ ನೆಟ್ಟು ಸುಮ್ಮನಾಗದ ಸಂಘಟನೆಯ ಸದಸ್ಯರು ಮುಂದಿನ ವಾರದಿಂದ ಗಿಡಗಳ ಪೋಷಣಾ ಅಭಿಯಾನ ಆರಂಭಿಸಲು ನಿರ್ಧರಿಸಿದ್ದಾರೆ.

ಈಗಾಗಲೇ ಸುಮಾರು ಎರಡು ಸಾವಿರ ಹಣ್ಣಿನ ಗಿಡಗಳನ್ನು ನೆಡಲಾಗಿದ್ದು, ಮುಂದಿನ ವಾರದಿಂದ ನೆಟ್ಟ ಗಿಡಗಳ ಉಸ್ತುವಾರಿ ಗಮನಿಸುವ ಸಲುವಾಗಿ ಮತ್ತೆ ಕಾಡಿನತ್ತ ವೇದಿಕೆಯ ಸದಸ್ಯರು ಮುಖ ಮಾಡಲಿದ್ದಾರೆ. ವಿವಿಧ ಕಾಲೇಜುಗಳ ಆಸಕ್ತ ವಿದ್ಯಾರ್ಥಿ ಸಮೂಹದೊಂದಿಗೆ ಈಗಾಗಲೇ ಬೆಳ್ತಂಗಡಿ, ಸುಬ್ರಹ್ಮಣ್ಯ, ಹೆಬ್ರಿ ಬಳಿಯ ಅರಣ್ಯ ಪ್ರದೇಶಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ.

ADVERTISEMENT

‘ಕಳೆದ ತಿಂಗಳ ಭಾನುವಾರಗಳಂದು ವಿದ್ಯಾರ್ಥಿ ಸಮೂಹದೊಂದಿಗೆ ಪರಿಸರ ಸಂರಕ್ಷಣಾ ವೇದಿಕೆಯ ಸದಸ್ಯರು ಅರಣ್ಯ ಪ್ರದೇಶಗಳಿಗೆ ತೆರಳಿ ಗಿಡಗಳನ್ನು ನೆಟ್ಟಿದ್ದಾರೆ. ಕೊಡಚಾದ್ರಿ ಮತ್ತು ಉಪ್ಪಿನಂಗಡಿ ಪ್ರದೇಶ ಅರಣ್ಯದಲ್ಲಿಯೂ ಹಣ್ಣಿನ ಗಿಡಗಳನ್ನು ನೆಡುವ ಉದ್ದೇಶವಿತ್ತು. ಆದರೆ ನರ್ಸರಿಗಳಲ್ಲಿ, ಅರಣ್ಯ ಇಲಾಖೆಯ ಬಳಿ ಹಣ್ಣಿನ ಗಿಡಗಳು ಸಿಗದೇ ಇರುವುದರಿಂದ ಮುಂದಿನ ವಾರದಿಂದಲೇ ಗಿಡಗಳ ಪೋಷಣೆಯತ್ತ ಗಮನ ಹರಿಸಲಿದ್ದೇವೆ’ ಎಂದು ವೇದಿಕೆಯ ಸಂಚಾಲಕರಲ್ಲಿ ಒಬ್ಬರಾದ ಶಮ್ಮಿ ಸಿರಿ ಹೇಳಿದ್ದಾರೆ.

ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿ ವರದಿಯಾದ ಪ್ರದೇಶಗಳನ್ನೇ ಆಯ್ಕೆ ಮಾಡಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಮಂಗ, ಕರಡಿ ಮುಂತಾದ ಪ್ರಾಣಿಗಳಿಗೆ ಕಾಡಿನಲ್ಲಿಯೇ ಆಹಾರ ಸಿಕ್ಕಿದರೆ ಅವುಗಳು ಊರಿಗೆ ಬಂದು ಉಪಟಳ ಕೊಡುವುದಿಲ್ಲ. ಅರಣ್ಯದಲ್ಲಿ ಖಾಲಿ ಇರುವ ಪ್ರದೇಶಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ ಎಂದು ಶಮ್ಮಿ ಸಿರಿ ವಿವರಿಸಿದ್ದಾರೆ. ಮಂಗಳೂರಿನ ಕೆನರಾ ಕಾಲೇಜು, ಅಲೋಶಿಯಸ್‌ ಕಾಲೇಜು, ಶ್ರೀನಿವಾಸ ಕಾಲೇಜು, ಯೂತ್‌ ಹಾಸ್ಟೆಲ್‌ ನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ವಿವೇಕ್‌ ಆಳ್ವ ಅವರ ನೇತೃತ್ವದಲ್ಲಿ ಬೃಹತ್‌ ಸಂಖ್ಯೆಯ ವಿದ್ಯಾರ್ಥಿಗಳು ಹೆಬ್ರಿಯ ಚಾರ ಅರಣ್ಯ ವಲಯದಲ್ಲಿ ಗಿಡ ನೆಟ್ಟರು. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.

ಸುಬ್ರಹ್ಮಣ್ಯ ಅರಣ್ಯ ವಲಯದಲ್ಲಿ 600 ಗಿಡಗಳನ್ನು ನೆಡಲಾಗಿದೆ. ಗಿಡಗಳು ಬೆಳೆಯುವಾಗಲೂ ಪ್ರಾಣಿಗಳ ಹಾವಳಿ ಇರುತ್ತದೆ. ಆದರೆ ನೆಟ್ಟ ಗಿಡಗಳಲ್ಲಿ ಅರ್ಧದಷ್ಟು ಉಳಿದರೂ ಅದರಿಂದ ಅನುಕೂಲವಾಗುತ್ತದೆ. ಪರಿಸರ ಸಂರಕ್ಷಣೆ ವೇದಿಕೆಯ ಸದಸ್ಯರು ಮತ್ತು ಕಾಲೇಜು ವಿದ್ಯಾರ್ಥಿಗಳ ಜೊತೆ ಬೆಳ್ತಂಗಡಿಯ ಅರಣ್ಯ ರಕ್ಷಕ ರಾಜು ಸೇರಿದಂತೆ ಇಲಾಖೆ ಸಿಬ್ಬಂದಿಯೂ ಈ ಗಿಡನೆಡುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.