ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಜತೆ ಮಾತನಾಡುವ ಪ್ರಶ್ನೆಯೆ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸಿದ್ದರಾಮಯ್ಯ ಅವರು ಜಿ.ಟಿ.ದೇವೆಗೌಡರ ಬೆಂಬಲ ಕೇಳಿರಬಹುದು. ಹಾಗೆಂದು ನಾನು ಜಿ.ಟಿ.ದೇವೆಗೌಡರ ಜೊತೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದುಗುರುವಾರ ಸುದ್ದಿಗಾರರಿಗೆ ಹೇಳಿದರು.
ಅವರಾಗೆ ನಮ್ಮ ಪಕ್ಷದ ಅಭ್ಯರ್ಥಿ ನಿಂತಿದ್ದಾರೆಅಂತ ಬೆಂಬಲ ಕೊಟ್ಟರೆ ಸ್ವಾಗತ. ಬೆಂಬಲ ಕೊಡಿ ಎಂದು ನಾನು ಕೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಚುನಾವಣೋತ್ತರ ಮೈತ್ರಿ ಕುರಿತು ನಾನೇನೂ ಹೇಳುವುದಿಲ್ಲ. ಸ್ವತಃ ಯಡಿಯೂರಪ್ಪ ಅವರೇ 8 ಸ್ಥಾನ ಗೆಲ್ಲದಿದ್ದರೆ ಸರ್ಕಾರ ಬೀಳಲಿದೆ ಎಂದು ಹೇಳಿದ್ದಾರೆ. ಅಲ್ಲಿಯವರೆಗೆ ನಾನೇಕೆ ಮೈತ್ರಿ ಬಗ್ಗೆ ಮಾತನಾಡಲಿ. ಉಪ ಚುನಾವಣೆಯ ಪಲಿತಾಂಶದ ನಂತರದ ಬೆಳವಣಿಗೆಗಳನ್ನು ನೋಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಬಂದಾಗಿನಿಂದ ಈ ರೀತಿ ಘಟನೆ ನಡೆಯುತ್ತಿದೆ. ಇದಕ್ಕೆ ಬೆಂಗಳೂರಿನಲ್ಲಿ ನಡೆದಿರುವ ಘಟನೆಗಳೆ ಸಾಕ್ಷಿ. ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗದಂತೆ ಒತ್ತಡ ಹೇರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಒತ್ತಡ ತಂತ್ರ ಅನುಸರಿಸಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಅವರು ಆರೋಪಿಸಿದರು.
ಹಿರೇಕೆರೂರಿನಲ್ಲಿ ನಮ್ಮ ಅಭ್ಯರ್ಥಿಯನ್ನು ಚುನಾವಣ ಕಣದಿಂದ ಹಿಂದೆ ಸರಿಸಲು ಮುಖ್ಯಮಂತ್ರಿಯ ಪುತ್ರರೆ ಸಭೆ ನಡೆಸಿದ್ದಾರೆ. ರಂಭಾಪುರಿ ಸ್ವಾಮೀಜಿಯ ಮನವೊಲಿಸುತ್ತಿದ್ದಾರಂತೆ. ಇಷ್ಟು ಒತ್ತಡಗಳನ್ನು ಹಾಕಿ ಚುನಾವಣೆ ಗೆಲ್ಲುವ ಅಗತ್ಯ ಇದಿಯಾ ಎಂದು ಪ್ರಶ್ನಿಸಿದರು.
ನಾನೇನು ಸ್ವಾಮೀಜಿ ಅವರನ್ನು ಕರೆದು ಟಿಕೆಟ್ ಕೊಟ್ಟಿರಲಿಲ್ಲ. ಅವರೆ ನಿಮ್ಮ ಪಕ್ಷದಿಂದ ಟಿಕೆಟ್ ಕೊಡಿ ಎಂದು ಕೇಳಿದ್ದರು. ಅವರ ಅಭಿಮಾನಿಗಳು ಒತ್ತಡ ಹಾಕಿದ್ದರು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.