ಬೆಂಗಳೂರು: ‘ಬದಲಾದ ಸನ್ನಿವೇಶದಲ್ಲಿ ಪ್ರತಿಭಟನೆಗಳಿಗೆ ಬೆಲೆಯಿಲ್ಲವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಹರಾಜಿಗೆ ಬಿದ್ದಿರುವ ದುರ್ಗತಿಯ ಸನ್ನಿವೇಶದಲ್ಲಿ ನಾವಿದ್ದೇವೆ. ಈ ವೇಳೆ ಶಾಂತವೇರಿ ಗೋಪಾಲಗೌಡ ಅವರ ರಾಜಕೀಯ ಸಂತಾನ ಕುಡಿವರಿದು, ಬಳ್ಳಿಯಾಗಿ ಹಬ್ಬಲಿ’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.
ಜನ ಪ್ರಕಾಶನ ನಗರದಲ್ಲಿ ಗುರುವಾರ ಹಮ್ಮಿಕೊಂಡ ಸಮಾರಂಭ ದಲ್ಲಿ ಶಾಂತವೇರಿ ಗೋಪಾಲಗೌಡ ಅವರ ಕುರಿತಾದ ‘ಸಮಾಜವಾದದ ಸಹ್ಯಾದ್ರಿ’ ಕೃತಿ ಬಿಡುಗಡೆಯಾಯಿತು. ‘ಇವತ್ತಿನ ರಾಜಕಾರಣವು ಮಾತಿನಿಂದ ಕೃತ್ಯದವರೆಗೂ ಹಾಳಾಗಿದೆ. ಈ ವೇಳೆ ರಾಜಕಾರಣದಲ್ಲಿ ಗೋಪಾಲಗೌಡ ಅಂತಹವರು ಯಾರೂ ಸಿಗುವುದಿಲ್ಲ. ಮೈಸೂರು ಮಹಾರಾಜರಿಗೆ ಸರ್ಕಾರ ಮಾಸಾಶನ ನೀಡುವುದನ್ನು ಅವರು ವಿರೋಧಿಸಿದ್ದರು’ ಎಂದು ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು.
‘ಶಾಂತವೇರಿ ಗೋಪಾಲಗೌಡ ಅವರು ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ರಾಜ್ಯಪಾಲರು ಕನ್ನಡದಲ್ಲಿಯೇ ಮಾತನಾಡಬೇಕು ಎಂದು ವಿಧಾನಸಭೆಯಲ್ಲಿ ಪಟ್ಟುಹಿಡಿದು ಕುಳಿತಿದ್ದರು. ಅದಕ್ಕೆ ಒಪ್ಪದಿದ್ದಾಗ ರಾಜ್ಯಪಾಲರ ಭಾಷಣದ ಪ್ರತಿಯನ್ನೇ ಸದನದಲ್ಲಿ ಹರಿದು ಹಾಕಿ, ತಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದ್ದರು. ಅಂತಹ ಮೌಲ್ಯಯುತ ರಾಜಕೀಯ ಮುತ್ಸದಿಗಳು ಈಗ ನಾಡಿಗೆ ಬೇಕಾಗಿದೆ’ ಎಂದು ಹೇಳಿದರು.
ಲೇಖಕಿ ಬಿ.ಟಿ. ಲಲಿತಾ ನಾಯಕ್, ‘ಶಾಂತವೇರಿ ಗೋಪಾಲಗೌಡ ಅವ ರಂತಹವರು 20ರಿಂದ 25 ಮಂದಿ ಶಾಸಕರಾಗಿ ಗೆದ್ದರೆ, ಕರ್ನಾಟಕ ರಾಜ್ಯವನ್ನು ಪ್ರಾಮಾಣಿಕ ರಾಜ್ಯವನ್ನಾಗಿ ಮಾಡಬಹುದು’ ಎಂದು ತಿಳಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಶಾಂತವೇರಿ ಗೋಪಾಲಗೌಡ ಅವರ ಹೋರಾಟದ ಜೀವನವನ್ನು ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.