ADVERTISEMENT

ಸವಾಲಾದ ನರಹಂತಕ ಚಿರತೆ ಜಾಡು: 21 ಬೋನು, 40 ಕಡೆ ಕ್ಯಾಮೆರಾ ಇಟ್ಟರೂ ಸುಳಿವಿಲ್ಲ!

ಡಿ.ಎಂ.ಕುರ್ಕೆ ಪ್ರಶಾಂತ
Published 1 ಮಾರ್ಚ್ 2020, 20:17 IST
Last Updated 1 ಮಾರ್ಚ್ 2020, 20:17 IST
ಬೋನಿಗೆ ಬಿದ್ದ ಚಿರತೆ (ಸಂಗ್ರಹ ಚಿತ್ರ)
ಬೋನಿಗೆ ಬಿದ್ದ ಚಿರತೆ (ಸಂಗ್ರಹ ಚಿತ್ರ)   

ತುಮಕೂರು: ತುಮಕೂರು, ಗುಬ್ಬಿ ಮತ್ತು ಕುಣಿಗಲ್ ತಾಲ್ಲೂಕಿನ ಜನರನ್ನು ಬೆಚ್ಚಿ ಬೀಳಿಸಿರುವ ನರಹಂತಕ ಚಿರತೆ ಸೆರೆಗೆ ಅರಣ್ಯ ಇಲಾಖೆ 12 ಕಿಲೊಮೀಟರ್‌ ವ್ಯಾಪ್ತಿಯಲ್ಲಿ 21 ಬೋನುಗಳು ಹಾಗೂ 40 ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ಎರಡು ತಿಂಗಳು ಕಳೆದಿವೆ. ಆದರೆ, ಆ ಚಿರತೆ, ಮನುಷ್ಯರು ಮತ್ತು ಜಾನುವಾರುಗಳ ಮೇಲೆ ದಾಳಿ ಮುಂದುವರಿಸಿದೆ.

ಚಿರತೆಗಳ ಚಲನವಲನ ಹೆಚ್ಚಿರುವ ಕುಣಿಗಲ್ ತಾಲ್ಲೂಕಿನ ಕೂತಾರಹಳ್ಳಿ ಮತ್ತು ಕುರುಪಾಳ್ಯದಲ್ಲಿ ಉದ್ಯಮಿ, ಗ್ರಾಮಸ್ಥರೂ ಆದ ಕೆ.ಟಿ.ಶ್ರೀನಿವಾಸ್‌ 26 ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಮೂರು ತಾಲ್ಲೂಕುಗಳು ಕೂಡುವ ಹೆಬ್ಬೂರು ಹೋಬಳಿ ಸುತ್ತಮುತ್ತ ನಾಲ್ಕು ತಿಂಗಳಲ್ಲಿ ನಾಲ್ವರು ಚಿರತೆ ದಾಳಿಗೆ ಬಲಿಯಾಗಿದ್ದಾರೆ. ತಿಂಗಳ ಹಿಂದೆ ಜಿಲ್ಲಾಡಳಿತ ‘ಆಪರೇಷನ್ ಸಮರ್ಥ್’ ಹೆಸರಿನಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಹುಲಿಗಳ ಜಾಡು ಹಿಡಿಯುವಲ್ಲಿ ಪರಿಣತರಾಗಿರುವ ಚಾಮರಾಜನಗರ ತಾಲ್ಲೂಕಿನ ಸೋಲಿಗರ ತಂಡ ಹಾಗೂ ಅರಣ್ಯ ಇಲಾಖೆಯ 25 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ADVERTISEMENT

ಈ ಪ್ರದೇಶದಲ್ಲಿ ಎರಡು ಚಿರತೆಗಳು ಬೋನಿಗೆ ಬಿದ್ದಿವೆ. ಆದರೆ ಅವು ‘ನರಹಂತಕ’ ಚಿರತೆಗಳೇ ಎನ್ನುವುದು ಖಚಿತವಾಗಿಲ್ಲ. ‘ಮನುಷ್ಯರ ಮೇಲೆ ತಿಂಗಳಿಗೊಂದರಂತೆ ಚಿರತೆ ದಾಳಿ ನಡೆದಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಪಾದಿಸುತ್ತಾರೆ.

‘ಈ ಹಿಂದೆ ಬೋನಿಗೆ ಬಿದ್ದ ಚಿರತೆಯನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ. ಅದು ಸೆರೆ ಆಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕಂಡಲ್ಲಿ ಗುಂಡಿಕ್ಕಲು ಆದೇಶ
‘ನರಹಂತಕ ಚಿರತೆಗೆ ಕಂಡಲ್ಲಿ ಗುಂಡಿಕ್ಕಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಕಾನೂನು ತೊಡಕುಗಳಿಗಿಂತ ಜನರ ಪ್ರಾಣ ಮುಖ್ಯ’ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು. ಬೈಚೇನಹಳ್ಳಿಯಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಚಂದನಾ ಕುಟುಂಬ ಸದಸ್ಯರನ್ನು ಭಾನುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು. ₹ 10 ಲಕ್ಷ ಪರಿಹಾರ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.