ಬೆಂಗಳೂರು: ‘ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಸಿರುವ ಪ್ರಕರಣದ ಮಾಹಿತಿ ಇದ್ದರೂ ಪ್ರಜ್ವಲ್ ರೇವಣ್ಣಗೆ ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿರುವುದು ಜೆಡಿಎಸ್ ನಾಯಕರ ತಪ್ಪು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಮಾಧ್ಯಮ ಸಂವಾದದಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರಜ್ವಲ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ವಿಡಿಯೊ ಚಿತ್ರೀಕರಿಸಿರುವ ಮಾಹಿತಿ ಜೆಡಿಎಸ್ ನಾಯಕರಿಗೆ ಆರು ತಿಂಗಳ ಹಿಂದೆಯೇ ಇತ್ತು. ಅಂತಹ ವ್ಯಕ್ತಿಗೆ ಮತ್ತೆ ಏಕೆ ಟಿಕೆಟ್ ನೀಡಬೇಕಿತ್ತು’ ಎಂದು ಕೇಳಿದರು.
ಕಾಂಗ್ರೆಸ್ ಸರ್ಕಾರ ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡುತ್ತಿದೆ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಅತ್ಯಾಚಾರ ಮಾಡಿದ್ದು ಪ್ರಜ್ವಲ್ ರೇವಣ್ಣ, ದೂರು ಕೊಟ್ಟಿರುವುದು ಸಂತ್ರಸ್ತ ಮಹಿಳೆಯರು. ಬಿಜೆಪಿ ವರಿಷ್ಠರಿಗೆ ಆರು ತಿಂಗಳ ಹಿಂದೆಯೇ ಪತ್ರ ಬರೆದು ಮಾಹಿತಿ ನೀಡಿದ್ದವರು ದೇವರಾಜೇಗೌಡ. ಸರ್ಕಾರ ಕಾನೂನಿನ ಪ್ರಕಾರ ತನಿಖೆ ನಡೆಸುತ್ತಿದೆ’ ಎಂದರು.
ದೂರವಾಣಿ ಸಂಭಾಷಣೆಗಳ ತುಣುಕುಗಳು ಸೇರಿದಂತೆ ಯಾವುದೇ ವಿಚಾರದ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ. ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಜೆಡಿಎಸ್ ನಾಯಕರು ಏಕೆ ಅಮಾನತು ಮಾಡಿದ್ದಾರೆ ಹೇಳಲಿ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.