ಕುಮಟಾ: ‘ಇನ್ನು ಮುಂದೆ 60 ವರ್ಷದವರನ್ನು ಸರ್ಕಾರವೇ ಗುರುತಿಸಿ ಅವರ ಮನೆಗಳಿಗೆ ಅರ್ಜಿ ಕಳುಹಿಸಲಿದೆ. ಬಳಿಕ ವಿವಿಧ ಮಾಸಾಶನಗಳನ್ನು ಮಂಜೂರು ಮಾಡಲಿದೆ’ ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್.ಅಶೋಕ ಹೇಳಿದರು.
ಪಟ್ಟಣದಲ್ಲಿಬುಧವಾರ ಮಿನಿ ವಿಧಾನಸೌಧ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಅಡಿ ವಿವಿಧೋದ್ದೇಶ ಆಶ್ರಯ ತಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರದ ದಾಖಲೆಯಲ್ಲಿ 60 ವರ್ಷ ತುಂಬಿದವರ ವಯಸ್ಸು ನೋಡಿ ಅವರಿಗೆ ಪತ್ರ ಬರೆಯಲಾಗುವುದು.ಇನ್ನು15 ದಿನಗಳಲ್ಲಿ ಉಡುಪಿಯಲ್ಲಿ ಈ ಯೋಜನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಗುವುದು. ಮಾಸಾಶನಕ್ಕೆ ಆಯ್ಕೆಯಾದವರಿಗೆ ಸ್ವತಃ ನಾನೇ ಅರ್ಜಿ ನಮೂನೆಯನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕಿಯೋಜನೆಗೆ ಚಾಲನೆ ನೀಡುತ್ತೇನೆ. ಇನ್ನು ಮುಂದೆ ಮಾಸಾಶನಗಳಿಗೆ ಯಾರೂ ಅರ್ಜಿ ಕೊಡುವ ಪದ್ಧತಿ ಇರುವುದಿಲ್ಲ’ ಎಂದರು.
ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆಯನ್ನುಜೆ.ಡಿ.ಎಸ್ ಶಾಸಕಾಂಗ ಪಕ್ಷದ ನಾಯಕಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇನ್ನು ಮುಂದೆ ಜನರೇ ಜೆ.ಡಿ.ಎಸ್ ಪಕ್ಷವನ್ನು ಅಣಕವಾಡಲಿದ್ದಾರೆ’ ಎಂದರು.
ಬಾಂಗ್ಲಾದೇಶದಿಂದ ಬಂದವರನ್ನು ಹೊರ ಹಾಕುವ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈ ಹಿಂದೆ ಕಾಂಗ್ರೆಸ್ ಪಕ್ಷವೇ ಬಾಂಗ್ಲಾ ನಿರಾಶ್ರಿತರಿಗೆ ಪಡಿತರ ಚೀಟಿ, ಭೂಮಿ ನೀಡಿ ಮತ ಬ್ಯಾಂಕ್ ಅನ್ನು ಹೆಚ್ಚಿಸಿಕೊಂಡಿತ್ತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.