ADVERTISEMENT

ಬೀದರ್‌ನಲ್ಲಿ ಸಿಖ್‌ರ ಅದ್ಧೂರಿ ಮೆರವಣಿಗೆ

ಸಂಭ್ರಮದ ಗುರುನಾನಕ್‌ ದೇವ ಜಯಂತಿಗೆ ಹರಿದುಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:50 IST
Last Updated 12 ನವೆಂಬರ್ 2019, 16:50 IST
ಗುರುನಾನಕ್‌ ಜಯಂತಿ ಅಂಗವಾಗಿ ಬೀದರ್‌ನಲ್ಲಿ ಮಂಗಳವಾರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಗುರುನಾನಕ್‌ ಜಯಂತಿ ಅಂಗವಾಗಿ ಬೀದರ್‌ನಲ್ಲಿ ಮಂಗಳವಾರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ   

ಬೀದರ್: ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ ಅವರ 550ನೇ ಜಯಂತಿ ಅಂಗವಾಗಿ ದೇಶದ ವಿವಿಧೆಡೆಯಿಂದ ಬಂದಿರುವ ಸಿಖ್‌ ಸಮುದಾಯದ ಸಹಸ್ರಾರು ಜನರು ನಗರದಲ್ಲಿ ಮಂಗಳವಾರ ಅದ್ಧೂರಿ ಮೆರವಣಿಗೆ ನಡೆಸಿದರು.

ಗುರುದ್ವಾರದ ಆವರಣದಲ್ಲಿ ನಿರ್ಮಿಸಿರುವ ಬೃಹತ್‌ ವೇದಿಕೆಯಲ್ಲಿ ದೇಶದ ವಿವಿಧೆಡೆಯ ಗುರುದ್ವಾರಗಳ ಪ್ರಮುಖರು ಗುರುಗ್ರಂಥ ಸಾಹಿಬ್‌ ಹಾಗೂ ಗುರುನಾನಕ್‌ ದೇವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಸಾಂಪ್ರದಾಯಿಕ ವೇಷ ಧರಿಸಿದ್ದ ಯುವಕರು ಹಾಗೂ ಕರಸೇವಕರು ನಿಶಾನ್ ಸಾಹಿಬ್ ಹಾಗೂ ಧಾರ್ಮಿಕ ಧ್ವಜ ಹಿಡಿದು ಜಯಘೋಷ ಮೊಳಗಿಸಿದರು. ನೀಲಿ ಹಾಗೂ ಹಳದಿ ಬಣ್ಣದ ಧಾರ್ಮಿಕ ಧ್ವಜಗಳು ಹಾಗೂ ನಿಶಾನ್‌ ಸಾಹಿಬ್‌ ಮೆರವಣಿಗೆ ಮುಂಚೂಣಿಯಲ್ಲಿದ್ದವು.

ಯುವಕರು ಆರ್ಭಟದೊಂದಿಗೆ ಕತ್ತಿ ವರಸೆ ಪ್ರದರ್ಶನ ನೀಡಿದರು. ಕೆಲ ಯುವಕರು ಬಾಯಲ್ಲಿ ಸೀಮೆಎಣ್ಣೆ ಹಾಕಿಕೊಂಡು ದೀವಟಿಗೆ ಮುಂದೆ ಚಿಮ್ಮಿಸಿ ಬೆಂಕಿ ಉಗುಳಿದರು. ಯುವಕರ ಈ ಪ್ರದರ್ಶನ ಪ್ರೇಕ್ಷಕರ ಮೈನವಿರೇಳಿಸಿತು. ಯುವಕರು ಉರಿಯುವ ದೀವಟಿಗೆ, ಖಡ್ಗ ಹಾಗೂ ಲಾಠಿ ತಿರುಗಿಸಿ ಯುದ್ಧ ಕೌಶಲ ಪ್ರದರ್ಶಿಸಿದರು.

ADVERTISEMENT

ಗುರುದ್ವಾರ ಶ್ರೀ ನಾನಕ್‌ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಕಮಿಟಿ ಸದಸ್ಯರು, ಸಿಖ್‌ ಮುಖಂಡರು ನೇತೃತ್ವ ವಹಿಸಿದ್ದರು.

ಇದಕ್ಕೂ ಮೊದಲು ಧಾರ್ಮಿಕ ಮುಖಂಡರಿಂದ ಗುರುದ್ವಾರದಲ್ಲಿ ಬೆಳಿಗ್ಗೆ ಕೀರ್ತನ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಿತು. ಸಾಮೂಹಿಕ ಗುರುಗ್ರಂಥ ಪಠಣ ಕಾರ್ಯಕ್ರಮವನ್ನು ವಿಧಿಬದ್ಧವಾಗಿ ಸಮಾರೋಪಗೊಳಿಸಲಾಯಿತು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಗ್ರಂಥ ಸಾಹಿಬ್‌ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.