ಬೆಂಗಳೂರು: ‘ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ತುಳಿಯುತ್ತಾ, ಅವರ ವಿಚಾರಗಳನ್ನು ಹತ್ತಿಕ್ಕುತ್ತಲೇ ಇರುವ ಆರ್ಎಸ್ಎಸ್–ಬಿಜೆಪಿ, ಈಗ ಅವರ ಹೆಸರಿನಲ್ಲೇ ಪಾದಯಾತ್ರೆ ನಡೆಸುತ್ತಿರುವುದು ಅಸಂಬದ್ಧ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಬಿ.ಆರ್.ಅಂಬೇಡ್ಕರ್ ಅವರು ಬಹಿಷ್ಕೃತ ಹಿತಕಾರಿಣಿ ಸಭೆಗೆ ಭೇಟಿ ನೀಡಿದ 100ನೇ ವರ್ಷಾಚರಣೆ ಸಂದರ್ಭದಲ್ಲಿ ಬಿಜೆಪಿಯು ನಿಪ್ಪಾಣಿಗೆ ಕೈಗೊಂಡಿರುವ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಅಂಬೇಡ್ಕರ್ ಅವರ ಆಶಯಗಳಿಗೆ ಸದಾ ವಿರುದ್ಧವಾಗಿಯೇ ನಡೆದುಕೊಂಡ ಬಿಜೆಪಿ, ಈಗ ಅವರ ಹೆಸರಿನಲ್ಲಿ ಯಾತ್ರೆ ನಡೆಸುತ್ತಿರುವುದು ದುರಂತ’ ಎಂದಿದ್ದಾರೆ.
‘ಜಾತಿ ಶ್ರೇಷ್ಠತೆಯ ಕಾರಣಕ್ಕಾಗಿ ತಮ್ಮ ಸಹಜೀವಿಗಳನ್ನು ಅಮಾನವೀಯವಾಗಿ ಶೋಷಣೆ ಮಾಡುತ್ತಿದ್ದ ಮನುವಾದಿಗಳ ಅಹಂಕಾರಕ್ಕೆ ಎದುರಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಆಶಯಗಳನ್ನು ಇಟ್ಟುಕೊಂಡು ಅಂಬೇಡ್ಕರ್ ಅವರು 1924ರಲ್ಲಿ ಬಹಿಷ್ಕೃತ ಹಿತಕಾರಿಣಿ ಸಭೆ ನಡೆಸಿದ್ದರು. ಮರು ವರ್ಷವೇ ಮನುವಾದಿಗಳು ಆರ್ಎಸ್ಎಸ್ ಅನ್ನು ಹುಟ್ಟುಹಾಕಿದರು’ ಎಂದಿದ್ದಾರೆ.
‘ಮಹಾಡ್ ನದಿಯ ನೀರನ್ನು ಮುಟ್ಟಿದ ದಿನವಂತೂ ಈ ಮನುವಾದಿಗಳು ಬಾಬಾ ಸಾಹೇಬರ ಮೇಲೆ ಹಲ್ಲೆಗೆ ಯೋಜಿಸಿದ್ದರು. ಸಾವರ್ಕರ್ ಆದಿಯಾಗಿ ಆರ್ಎಸ್ಎಸ್ ಮನುವಾದಿಗಳು ತಮ್ಮನ್ನು ಚುನಾವಣೆಯಲ್ಲಿ ಸೋಲಿಸಲು ಸಂಚು ರೂಪಿಸಿದ್ದರು ಎಂದು ಸ್ವತಃ ಅಂಬೇಡ್ಕರ್ ಪತ್ರದಲ್ಲಿ ಬರೆದುಕೊಂಡಿದ್ದರು’ ಎಂದು ಹೇಳಿದ್ದಾರೆ.
‘ದೇಶದ ಆತ್ಮವಾದ ಸಂವಿಧಾನವನ್ನು ಬದಲಿಸುತ್ತೇವೆ ಎನ್ನುವ, ಇನ್ನೆಷ್ಟು ದಿನ ಮೀಸಲಾತಿ ಎಂದು ಪ್ರಶ್ನಿಸುವ ಬಿಜೆಪಿಗರು, ಈ ದಿನ ಅಂಬೇಡ್ಕರ್ ಪರವಾಗಿ ಪಾದಯಾತ್ರೆ ಮಾಡುತ್ತೇನೆ ಎನ್ನುತ್ತಿರುವುದು ಅತ್ಯಂತ ಬಾಲಿಶ ಮತ್ತು ಅಸಂಬದ್ಧ’ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಬಾಬಾ ಸಾಹೇಬರ ಬಗ್ಗೆ ಹಗುರವಾಗಿ ಮಾತನಾಡಿದಾಗ ಚಕಾರ ಎತ್ತದ ಬಿಜೆಪಿ ನಾಯಕರು ಈಗ ಪಾದಯಾತ್ರೆ ನಡೆಸುತ್ತಿರುವುದೇಕೆ?ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.