ಬೆಂಗಳೂರು: ಪಹಲ್ಗಾಮ್ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಪೈಶಾಚಿಕ ಭಯೋತ್ಪಾದಕ ದಾಳಿ ಮತ್ತು ಉಗ್ರರಿಗೆ ಪಾಕಿಸ್ತಾನದ ಚಿತಾವಣಿಯಷ್ಟೇ ಅಲ್ಲದೇ ತನ್ನ ತನು, ಮನ, ಧನ ಅರ್ಪಣೆ ಮಾಡುತ್ತಿರುವುದನ್ನು ಖಂಡಿಸುವ ಬದಲಿಗೆ ಕಾಂಗ್ರೆಸ್ ಪಕ್ಷವು ಸೇನಾಪಡೆಗಳನ್ನು, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ನಿಂದಿಸುತ್ತಿರುವುದು ನಾಚಿಕೆಗೇಡು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತಂತೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕಾಂಗ್ರೆಸ್, ಭಾರತದ ರಾಜಕೀಯ ಪಕ್ಷವೋ? ಅಥವಾ ಶತ್ರು ದೇಶದ ವಕ್ತಾರಿಕೆ ಮಾಡುತ್ತಿರುವ ಪಕ್ಷವೋ? ಅದರ ತನ್ನ ಡಿಎಸ್ಎ ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? ಎಂಬುದನ್ನು ಅದುವೇ ಸ್ಪಷ್ಟಪಡಿಸಬೇಕು ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನ ಸೃಷ್ಟಿಯಾಗಿದ್ದು ಹೇಗೆ? ಅದರಲ್ಲಿ ಕಾಂಗ್ರೆಸ್ ಪಾತ್ರವೇನು? ಎಂಬ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಆದರೆ, ದೇಶ ವಿಭಜನೆಯಾಗಿ ಏಳೂವರೆ ದಶಕ ಮೀರಿದರೂ ಆ ಪಕ್ಷ ಇನ್ನೂ ಪಾಕಿಸ್ತಾನದ ಮನಃಸ್ಥಿತಿಯಲ್ಲೇ ಇದೆ! ಅಸ್ತಿತ್ವ ಭಾರತದಲ್ಲಿ, ಅದರ ಹೃದಯ ಮಾತ್ರ ಪಾಕಿಸ್ತಾನದಲ್ಲಿ!! ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ ಎಂದು ಆರೋಪಿಸಿದ್ದಾರೆ.
ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಕಾಂಗ್ರೆಸ್ ಪಕ್ಷದ ಅಂತರಾತ್ಮದ ದನಿ. ಆಚಾರವಿಲ್ಲದ ನಾಲಿಗೆ.. ಆಪರೇಷನ್ ಸಿಂಧೂರ್ ಬೂಟಾಟಿಕೆಯಂತೆ! ಇಡೀ ರಾಷ್ಟ್ರದ ಹೆಮ್ಮೆಯಾಗಿರುವ ಈ ಯಶಸ್ವಿ ಕಾರ್ಯಾಚರಣೆಯ ವಿರಾಟ್ ಸ್ವರೂಪವನ್ನು ಖುದ್ದು ನೋಡಬೇಕೆ ಮಂಜುನಾಥ್..? ಹಾಗಿದ್ದರೆ ಬನ್ನಿ, ನಿಮ್ಮನ್ನು ಪಾಕಿಸ್ತಾನಕ್ಕೆ ಕಳಿಸಿ ಕೊಡುತ್ತೇವೆ. ಭಾರತೀಯ ಸೇನೆಯ ಪರಾಕ್ರಮವನ್ನು ಖುದ್ದು ನೋಡಿಕೊಂಡು ಬರುವಿರಂತೆ. ಹೋಗುವಿರಾ ಪಾಕಿಸ್ತಾನಕ್ಕೆ..? ಎಂದು ಪ್ರಶ್ನಿಸಿದ್ದಾರೆ.
ಆಯೋಗಕ್ಕೆ ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಜನತೆಗೆ ಟೋಪಿ ಹಾಕಿ ಚುನಾವಣೆ ಗೆದ್ದಿದ್ದ ಈ ಕಿಡಿಗೇಡಿ ಕಾಂಗ್ರೆಸ್ ಶಾಸಕ, ತನ್ನೊಳಗಿದ್ದ ವಿಷವನ್ನೇ ಕಕ್ಕಿಕೊಂಡಿದ್ದಾರೆ. ಅಂಥ ವಿಷಕಾರಿ ಡಿಎನ್ಎ ಉಳ್ಳ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಪ್ರೇಮವಿರಲು ಸಾಧ್ಯವೇ..? ಆಪರೇಷನ್ ಸಿಂಧೂರ್ ನಂತರ ಸೀನಿಯರ್ ಖರ್ಗೆ, ಜ್ಯೂನಿಯರ್ ಖರ್ಗೆ, ರಾಹುಲ್ ಗಾಂಧಿ ಸೇರಿ ಕರ್ನಾಟಕದ ಸೋ ಕಾಲ್ಡ್ ಕಾಂಗ್ರೆಸ್ ನಾಯಕರ ಆಣಿಮುತ್ತುಗಳನ್ನು ಗಮನಿಸಿದರೆ ಅವರ ಪ್ರೇಮ ಯಾವ ರಾಷ್ಟ್ರದ ಮೇಲೆ ಎಂದು ತಿಳಿಯುತ್ತದೆ!. ಹಾಗೆಯೇ; ಪ್ರಧಾನಿ ನರೇಂದ್ರ ಮೋದಿ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಅವರ ಹೇಳಿಕೆಗಳನ್ನೂ ದೇಶ ಗಮನಿಸಿದೆ. ರಾಷ್ಟ್ರದ ಬಗ್ಗೆ ಅವರಿಗಿರುವ ಬದ್ಧತೆ, ಆಚಲತೆಯನ್ನು ನೋಡಿದೆ, ಕೊಂಡಾಡಿದೆ. ರಾಷ್ಟ್ರ ದ್ರೋಹ ಮತ್ತು ರಾಷ್ಟ್ರಪ್ರೇಮಕ್ಕೆ ಇರುವ ವ್ಯತ್ಯಾಸವಿದು ಎಂದಿದ್ದಾರೆ.
ರಾಷ್ಟ್ರ ನಿಂದನೆ, ಸೇನೆಯ ನಿಂದನೆ ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ. ಅದು ಕಾಂಗ್ರೆಸ್ ಪಕ್ಷಕ್ಕೆ ಜನ್ಮತಃ ಅಂಟಿರುವ ಜಾಡ್ಯ. ಪಾಕಿಸ್ತಾನ್ ನ್ಯಾಶನಲ್ ಕಾಂಗ್ರೆಸ್ ಪಾರ್ಟಿಯಾಗಿ ರೂಪಾಂತರಗೊಂಡಿರುವ ಆ ಪಕ್ಷದ ಅಸಲಿ ಅಜೆಂಡಾ ಏನು? ಹಿಡನ್ ಹಿಡೆನ್ ಏನೆಲ್ಲಾ ಮಾಡುತ್ತಿದೆ..!? ಇದು ನನ್ನ ಮೂಲಭೂತ ಪ್ರಶ್ನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.