ADVERTISEMENT

ಸಾರಾ ಮಹೇಶ್‌ ಅವರಿಂದ ಜಾತಿ ರಾಜಕಾರಣ: ವಿಶ್ವನಾಥ್‌ ಆರೋಪ

ಜಾತಿ ದ್ವೇಷದ ರಾಜಕಾರಣ ಮಾಡಿಲ್ಲ: ಸಾ.ರಾ.ಮಹೇಶ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 18:51 IST
Last Updated 1 ಜೂನ್ 2019, 18:51 IST
ವಿಶ್ವನಾಥ್
ವಿಶ್ವನಾಥ್   

ಕೆ.ಆರ್.ನಗರ/ ಮಡಿಕೇರಿ: ಕೆ.ಆರ್‌.ನಗರ ಪುರಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವ ವಿಚಾರವಾಗಿ ತಮ್ಮ ಸಲಹೆಯನ್ನು ಧಿಕ್ಕರಿಸಿ, ಸಚಿವ ಸಾ.ರಾ.ಮಹೇಶ್‌ ಜಾತಿ ರಾಜಕಾರಣ ಮಾಡಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಶನಿವಾರ ಇಲ್ಲಿ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಮಹೇಶ್‌, ‘ಜೆಡಿಎಸ್ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ವಿಶ್ವನಾಥ್‌ ಅವರನ್ನೇ ರಾಜ್ಯ ಘಟಕದ ಅಧ್ಯಕ್ಷರನ್ನಾಗಿಒಪ್ಪಿಕೊಂಡ ಮೇಲೆ ಅವರ ಸಲಹೆ ಒಪ್ಪಿಕೊಳ್ಳದೇ ಇರಲು ಸಾಧ್ಯವೇ?’ ಎಂದು ತಿರುಗೇಟು ನೀಡಿದ್ದಾರೆ.

ಕೆ.ಆರ್‌.ನಗರದಲ್ಲಿ ಮಾತನಾಡಿದ ವಿಶ್ವನಾಥ್‌, ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ, ಕೆ.ಆರ್.ನಗರ ಪುರಸಭಾ ಚುನಾವಣೆಯಲ್ಲಿ ಕುರುಬ ಜನಾಂಗಕ್ಕೆ ಒಂದೇ ಒಂದು ಟಿಕೆಟ್‌ ಕೊಡಿಸಲು ನನ್ನಿಂದ ಸಾಧ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಇಲ್ಲಿಯೇ 40 ವರ್ಷ ರಾಜಕಾರಣ ಮಾಡಿದವನು ನಾನು. ಸಾಕಷ್ಟು ಜನರಿಗೆ ಟಿಕೆಟ್ ಕೊಟ್ಟವನಿದ್ದೆ. ಈ ಬಾರಿ ಸಚಿವ ಮಹೇಶ್ ಅವರಿಗೆ ಕೆಲ ವಾರ್ಡ್‌ಗಳಲ್ಲಿ ಕುರುಬರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದೆ. ಸಚಿವರು ನನ್ನ ಮನವಿ ಧಿಕ್ಕರಿಸಿದರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಮಹೇಶ್ ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ, ಸಚಿವರೂ ಆಗಿದ್ದಾರೆ. ಆದರೆ, ಒಂದು ಜಾತಿಯನ್ನು ಇಷ್ಟೊಂದು ದ್ವೇಷ ಮಾಡುವುದು ಸರಿಯಲ್ಲ. ಅಲ್ಲದೇ, ಒಂದೇ ಜಾತಿಯಿಂದ ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ಸಾಧ್ಯವಿಲ್ಲ. ಆದ್ದರಿಂದ ಜಾತಿ ರಾಜಕಾರಣಕ್ಕೆ ಅಂತ್ಯ ಹಾಡಬೇಕು. ಎಲ್ಲ ಜಾತಿ, ಜನಾಂಗ ಸೇರಿದರೆ ಮಾತ್ರ ರಾಜಕಾರಣ ಮಾಡಲು ಸಾಧ್ಯವಾಗುತ್ತದೆ’ ಎಂದರು.

‘ಜನರು ಮನಸು ಮಾಡಿದ್ದರಿಂದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಗೆಲ್ಲುವಂತಾಯಿತು. ಸಚಿವ ಸಾ.ರಾ.ಮಹೇಶ್ ಹಣದಿಂದ ಜನರನ್ನು ಅಳೆಯಬಾರದು. ಹಣದಿಂದಲೇ ರಾಜಕಾರಣ ಮಾಡುತ್ತೇನೆ ಎನ್ನುವುದು ದುರಹಂಕಾರದ ಮಾತಾಗುತ್ತದೆ. ಹಾಗಾಗಿ, ತಿದ್ದಿಕೊಂಡು ನಡೆಯುವುದು ಒಳ್ಳೆಯದು’ ಎಂದು ವಿಶ್ವನಾಥ್ ಸಚಿವ ಸಾ.ರಾ.ಮಹೇಶ್ ಅವರಿಗೆ ಎಚ್ಚರಿಸಿದರು.

ವಿಶ್ವನಾಥ ಆರೋಪಗಳಿಗೆ, ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಪ್ರತಿಕ್ರಿಯಿಸಿದ ಸಚಿವ ಮಹೇಶ್‌, ‘ವಿಶ್ವನಾಥ್‌ ನಮ್ಮ ಮಾರ್ಗದರ್ಶಕರು. ಅವರ ಸಲಹೆ ಹಾಗೂ ಸೂಚನೆಗಳಲ್ಲಿ ಸತ್ಯಾಂಶವಿದ್ದರೆ ಸ್ವೀಕರಿಸುತ್ತೇನೆ’ ಎಂದರು.

‘ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ. ಮುಂದಿನ ಚುನಾವಣೆಗಳಲ್ಲಿ ಅದನ್ನು ಸರಿಪಡಿಸಿಕೊಳ್ಳುವ ಕುರಿತು ಅವರು ಸಲಹೆ ನೀಡಿದರೆ ತಿದ್ದಿಕೊಳ್ಳುತ್ತೇನೆ. ಮಾರ್ಗದರ್ಶನ ಪಡೆಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.