ADVERTISEMENT

ಶ್ರೀಕೃಷ್ಣ ದೋಚಿದ್ದ 900 ಬಿಟಿಸಿ ಮಾರಿದ್ದ ರಾಬಿನ್‌!

ಹ್ಯಾಕರ್ ಜೊತೆ ಕೈ ಜೋಡಿಸಿದ್ದ ಬಿ.ಕಾಂ ಪದವೀಧರ l ಮಾರುಕಟ್ಟೆ ಮೌಲ್ಯ ₹414.05 ಕೋಟಿ

ಸಂತೋಷ ಜಿಗಳಿಕೊಪ್ಪ
Published 2 ನವೆಂಬರ್ 2021, 22:15 IST
Last Updated 2 ನವೆಂಬರ್ 2021, 22:15 IST
ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ
ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ    

ಬೆಂಗಳೂರು: ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ದೋಚುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್‌ ಕಾಯಿನ್‌ಗಳನ್ನು (ಬಿಟಿಸಿ), ‘ರಾಬಿನ್ ಆನ್‌ಲೈನ್ ಸರ್ವೀಸಸ್’ ಕಂಪನಿಯ ಸಂಸ್ಥಾಪಕ ರಾಬಿನ್ ಖಂಡೆಲ್‌ವಾಲಾ (34) ಮಾರಿಕೊಡುತ್ತಿದ್ದ ಅಂಶ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ.

ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಸಿಬಿ ಪೊಲೀಸರು, ಶ್ರೀಕೃಷ್ಣ ಹಾಗೂ ರಾಬಿನ್ ಖಂಡೆಲ್‌ವಾಲಾ ನಡುವಿನ ವ್ಯವಹಾರದ ಬಗ್ಗೆ ದಾಖಲೆ ಸಮೇತ ವಿವರಿಸಿದ್ದಾರೆ.

‘ಹಣ ವಿನಿಮಯ ಏಜೆನ್ಸಿಗಳ ಸರ್ವರ್ ಹಾಗೂ ಜಾಲತಾಣ ಹ್ಯಾಕ್ ಮಾಡುತ್ತಿದ್ದ ಶ್ರೀಕೃಷ್ಣ, ಅದರಿಂದ ಬಿಟ್ ಕಾಯಿನ್‌ಗಳನ್ನು ಗಳಿಸುತ್ತಿದ್ದ. ಅದೇ ಬಿಟ್ ಕಾಯಿನ್‌ಗಳನ್ನು ರಾಬಿನ್‌ ಖಂಡೆಲ್‌ವಾಲಾಗೆ ಕೊಟ್ಟು, ಬೇರೆಯವರಿಗೆ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದ. ಅದಕ್ಕೆ ಪ್ರತಿಯಾಗಿ ಕಮಿಷನ್ ಸಹ ಕೊಡುತ್ತಿದ್ದ’ ಎಂಬ ಮಾಹಿತಿ ಸಿಸಿಬಿ ಆರೋಪ ಪಟ್ಟಿಯಲ್ಲಿದೆ.

ADVERTISEMENT

‘ಬಿಟ್‌ ಕಾಯಿನ್ ದೋಚುವುದು ಶ್ರೀಕೃಷ್ಣನಿಗೆ ಸುಲಭವಾಗಿತ್ತು. ಆದರೆ, ಅವುಗಳನ್ನು ಮಾರುವುದು ಕಠಿಣವಾಗಿತ್ತು. ಹೀಗಾಗಿ, ಆತ ರಾಬಿನ್ ಖಂಡೆಲ್‌ವಾಲಾ ಸ್ನೇಹ ಬೆಳೆಸಿದ್ದ’ ಎಂಬ ಸಂಗತಿಯೂ ಪಟ್ಟಿಯಲ್ಲಿದೆ.

‘2017ರಿಂದ ಇದುವರೆಗೂ ರಾಬಿನ್ ಜೊತೆ ₹ 8 ಕೋಟಿ ವ್ಯವಹಾರ ಮಾಡಿರುವುದಾಗಿ ಶ್ರೀಕೃಷ್ಣ ಹೇಳಿಕೆ ನೀಡಿದ್ದಾನೆ. ಆದರೆ, ಅದಕ್ಕೂ ಹೆಚ್ಚಿನ ವಹಿವಾಟು ನಡೆದಿರುವ ಅನುಮಾನವಿದೆ.’

‘ಕ್ಲೌಡ್’ ವ್ಯವಸ್ಥೆಯಲ್ಲಿ ಶ್ರೀಕೃಷ್ಣನ ಖಾತೆ ಇದ್ದು, ಅದಕ್ಕೆ ಸಂಬಂಧಪಟ್ಟ ‘ಪ್ರೈವೇಟ್ ಕೀಗಳು’ ಆತನ ಬಳಿ ಇವೆ. ಅದನ್ನು ಬಳಸಿ ಬಿಟ್ ಕಾಯಿನ್ ವಾಪಸ್‌ ತರುವುದಾಗಿಯೂ ಶ್ರೀಕೃಷ್ಣ ಹೇಳಿಕೆಯಲ್ಲಿ ತಿಳಿಸಿದ್ದಾನೆ’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

ಮೊದಲ ಪರಿಚಯದಲ್ಲೇ 900 ಬಿಟಿಸಿ ವ್ಯವಹಾರ; ‘ಪಶ್ಚಿಮ ಬಂಗಾಳದ ರಾಬಿನ್, ಕೊಲ್ಕತ್ತಾದ ಗೋಯೆಂಕಾ ಕಾಲೇಜಿನಲ್ಲಿ 2008ರಲ್ಲಿ ಬಿ.ಕಾಂ ಪದವಿ ಮುಗಿಸಿದ್ದ. ಲೆಕ್ಕ ಪರಿಶೋಧಕ (ಸಿ.ಎ) ಅರ್ಹತಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಲೇ ತಂದೆಯ ಅಕ್ಕಿ ಮಿಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ಬಿಟ್ ಕಾಯಿನ್ ವ್ಯವಹಾರಕ್ಕೆ ಕೈ ಹಾಕಿದ್ದ ರಾಬಿನ್, ತನ್ನದೇ ‘ರಾಬಿನ್ ಆನ್‌ಲೈನ್ ಸರ್ವಿಸಸ್’ ಟ್ರೇಡಿಂಗ್ ಕಂಪನಿ ಆರಂಭಿಸಿದ್ದ. ಲೋಕಲ್ ಬಿಟ್‌ ಕಾಯಿನ್, ಪ್ಯಾಕ್ಸ್‌ಫುಲ್, ರೆಮಿಟಾನೊ, ಬಿನಾನ್ಸ್, ವಜಿರಕ್ಸ್, ಜೆಪ್ಪೈ ಹಾಗೂ ಇತರೆ ಜಾಲತಾಣಗಳ ಮೂಲಕ ಜನರನ್ನು ಸಂಪರ್ಕಿಸಿ ಬಿಟ್ ಕಾಯಿನ್ ಖರೀದಿ ಹಾಗೂ ಮಾರಾಟ ಮಾಡಲಾರಂಭಿಸಿದ್ದ.’

‘ಲೋಕಲ್ ಬಿಟ್ ಕಾಯಿನ್ ಜಾಲತಾಣದ ಮೂಲಕ 2017ರಲ್ಲಿ ರಾಬಿನ್‌ಗೆ ಶ್ರೀಕೃಷ್ಣನ ಪರಿಚಯವಾಗಿತ್ತು. ತನ್ನ ಹೆಸರು ‘ಡೇರಿಯಲ್ ಹಾರ್ಮನ್’ ಎಂಬುದಾಗಿ ಶ್ರೀಕೃಷ್ಣ ಹೇಳಿಕೊಂಡಿದ್ದ. ತನ್ನ ಬಳಿ 900 ಬಿಟ್ ಕಾಯಿನ್ (2021ರ ನ. 2ರ ಮಾರುಕಟ್ಟೆ ಮೌಲ್ಯ₹ 414.05 ಕೋಟಿ) ಇದ್ದು, ಅವುಗಳನ್ನು ಮಾರಾಟ ಮಾಡಿಸಿ ಕೊಡುವಂತೆ ವಿನಂತಿಸಿದ್ದ. ಅದಕ್ಕೆ ಒಪ್ಪಿದ್ದ ರಾಬಿನ್, ಹಂತ ಹಂತವಾಗಿ ಬಿಟ್ ಕಾಯಿನ್ ಮಾರಿ ಶ್ರೀಕೃಷ್ಣ ಹೇಳಿದ್ದ ಖಾತೆಗಳಿಗೆ ಹಣ ಜಮೆ ಮಾಡಿದ್ದ. ಅದಕ್ಕಾಗಿ ಕಮಿಷನ್ ಸಹ ಪಡೆದಿದ್ದ’ ಎಂಬ ಸಂಗತಿಯೂ ಆರೋಪ ಪಟ್ಟಿಯಲ್ಲಿದೆ.

‘2018ರಲ್ಲಿ ಶ್ರೀಕೃಷ್ಣನನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದ ರಾಬಿನ್, ಆತನ ಜೊತೆಯಲ್ಲೇ ಹೋಟೆಲೊಂದರಲ್ಲಿ ಮೂರು ದಿನ ವಾಸವಿದ್ದ. ತಾನೊಬ್ಬ ಅಂತರರಾಷ್ಟ್ರೀಯ ಹ್ಯಾಕರ್ ಎಂಬುದಾಗಿ ಹೇಳಿಕೊಂಡಿದ್ದ ಶ್ರೀಕೃಷ್ಣ, ತನ್ನ ಬಳಿ ಸಾಕಷ್ಟು ಬಿಟ್ ಕಾಯಿನ್‌ ಇರುವುದಾಗಿ ತಿಳಿಸಿದ್ದ. ಅದನ್ನು ಮಾರಿಸಿ ಕೊಟ್ಟರೆ ಹೆಚ್ಚು ಕಮಿಷನ್ ಕೊಡುವುದಾಗಿ ಭರವಸೆ ನೀಡಿದ್ದ. ಅದಾದ ನಂತರ, ಇಬ್ಬರ ನಡುವೆ ವ್ಯವಹಾರ ಜೋರಾಗಿತ್ತು. ಇಬ್ಬರೂ ವಿಕ್ಕರ್ ಹಾಗೂ ಮೆಸೆಂಜರ್‌ ಆ್ಯಪ್‌ನಲ್ಲಿ ಮಾತ್ರ ಚಾಟಿಂಗ್ ಮಾಡುತ್ತಿದ್ದರು. ‘ರಾಬಿನ್ ನನ್ನ ಲೆಕ್ಕಾಧಿಕಾರಿ’ ಎಂದೇ ಶ್ರೀಕೃಷ್ಣ ಬೇರೆಯವರಿಗೆ ಪರಿಚಯ ಮಾಡಿಕೊಡುತ್ತಿದ್ದ.’

‘ಶ್ರೀಕೃಷ್ಣ ಸೂಚಿಸುತ್ತಿದ್ದ ಖಾತೆಗಳಿಗೆ ತನ್ನ ಖಾತೆಯಿಂದ ₹ 3.48 ಕೋಟಿ ಪಾವತಿಸಿದ್ದ ರಾಬಿನ್, ಹೈದರಾಬಾದ್‌ನ ಅಭಿಷೇಕ್ ಜೈನ್ ಎಂಬಾತನಿಂದ ₹ 4.98 ಕೋಟಿ (ಹವಾಲಾ ಮೂಲಕ) ಹಾಗೂ ಮುಂಬೈನ ಸುಮಿತ್ ಅಗರ್‌ವಾಲ್ ಎಂಬಾತನಿಂದ ₹ 20 ಲಕ್ಷ ಕೊಡಿಸಿದ್ದ. ಈ ಬಗ್ಗೆ ರಾಬಿನ್ ಹೇಳಿಕೆ ನೀಡಿದ್ದು, ಅದರಲ್ಲೂ ಸಾಕಷ್ಟು ಗೊಂದಲಗಳಿವೆ’ ಎಂಬ ಅಂಶವನ್ನೂ ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.

‘ಹ್ಯಾಕಿಂಗ್ ಹಾಗೂ ಬಿಟ್ ಕಾಯಿನ್ ವ್ಯವಹಾರಕ್ಕಾಗಿ ಶ್ರೀಕೃಷ್ಣ, ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್ ಬಳಸುತ್ತಿದ್ದ. ಅದು ಕೈಯಿಂದ ಜಾರಿಬಿದ್ದು ಒಡೆದು ಹೋಗಿತ್ತು. ನಂತರ, ರಾಬಿನ್‌ ಬಳಿಯ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್ ಅನ್ನು ಕೃತ್ಯಕ್ಕೆ ಬಳಸಲಾರಂಭಿಸಿದ್ದ’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

ರಾಬಿನ್‌ ಹಣ ನೀಡಿದ್ದ ಪ್ರಮುಖರ ವಿವರ (₹ ಲಕ್ಷಗಳಲ್ಲಿ)

ಎವಿಎಸ್ ಚೈತನ್ಯ; 4.82
ಆಕಾಶ್ ವಿನೋದ್; 5.98
ಹಿಮಾಲಯಾಸ್ ಆನಂದ್; 2.36
ಭಾರ್ಗವ್; 7.57
ಚೇತನ್ ಸುರೇಶ್; 4.30
ಚಿಪ್ಸನ್ ಅವಿಯೇಷನ್ ಪ್ರೈ.ಲಿ; 11.00
ಕೊರ್ಗಾ ಟ್ರೇಡ್ ಲಿಂಕ್ಸ್; 2.50
ಫ್ರೆಂಡ್ಲಿ ಆಟೊಮೋಟಿವ್ ಪ್ರೈ.ಲಿ; 45.00
ಸಿ.ಯು. ಗಣಪತಿ; 3.20
ಐಟಿಸಿ ಲಿ.; 8.84
ಕರಣ್ ದಿಲೀಪ್; 18.03
ಡಿ.ಕೆ. ಮನೀಶ್; 2.73
ಎಂ. ಸುಪ್ರಿಯಾ; 3.03
ನಫಿ ಮೊಹಮ್ಮದ್ ನಾಸೀರ್; 26.72 ಕೋಟಿ
ನರೇಶ್ ಮಾತ್ರೆ; 4.00
ಒರ್ಕಾ ಸೈಲ್ ಬೋಟ್ ಪ್ರೈ.ಲಿ; 10.00
ಪ್ರಸಿದ್ದ ಶೆಟ್ಟಿ; 6.50
ಸಿದ್ಧಾರ್ಥ್ ರಾಮ್; 6.02
ಎಲ್. ವಿಜಯ್; 10.00
ಮಿಸ್ಕ್ ಅಕೌಂಟ್; 59.14
ಕೆರೇಸ್ ಹೋಟೆಲ್; 10.00
ಡೆಲ್ಟಾ ಗ್ರೂಪ್; 25.00
ಇಂಡಿಯನ್ ಹೋಟೆಲ್; 4.85
ನಿತೀನ್ ಜಯಕುಮಾರ್; 12.60
ಸುನೀಶ್; 5.00

‘ಮೊಬೈಲ್ ಬಳಸಲ್ಲ, ಬ್ಯಾಂಕ್ ಖಾತೆಯೂ ಇಲ್ಲ’

‘ತಂತ್ರಜ್ಞಾನ ಬಳಕೆಯಲ್ಲಿ ಪರಿಣಿತನಾಗಿದ್ದ ಶ್ರೀಕೃಷ್ಣ, ಮೊಬೈಲ್ ಬಳಸುತ್ತಿರಲಿಲ್ಲ. ಯಾವ ಬ್ಯಾಂಕ್‌ನಲ್ಲೂ ಖಾತೆ ತೆರೆದಿರಲಿಲ್ಲ. ತನ್ನ ಬಗ್ಗೆ ಪೊಲೀಸರಿಗೆ ಸುಳಿವು ಸಿಗಬಾರದೆಂದು ಆತ ಈ ರೀತಿ ಮಾಡುತ್ತಿದ್ದ’ ಎಂಬ ಸಂಗತಿಯೂ ಪಟ್ಟಿಯಲ್ಲಿದೆ.

‘ಪರಿಚಯಸ್ಥರು ಹಾಗೂ ಸ್ನೇಹಿತರ ಬ್ಯಾಂಕ್ ಖಾತೆ ವಿವರವನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಬಿಟ್‌ ಕಾಯಿನ್‌ ಮಾರಾಟದಿಂದ ಬರುತ್ತಿದ್ದ ಹಣವನ್ನು ಅದೇ ಖಾತೆಗಳಿಗೆ ಜಮೆ ಮಾಡಿಸುತ್ತಿದ್ದ. ನಂತರ, ಅವರಿಂದ ಕೇಳಿ ಹಣ ಪಡೆದುಕೊಳ್ಳುತ್ತಿದ್ದ’ ಎಂದೂ ಹೇಳಲಾಗಿದೆ.

ಹೆಸರು ಬಹಿರಂಗಕ್ಕೆ ಆಗ್ರಹ

‘ಬಿಟ್‌ ಕಾಯಿನ್‌ ಪ್ರಕರಣದಲ್ಲಿ ರಾಜಕೀಯ ನಾಯಕರೂ ಶಾಮೀಲಾಗಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್‌, ಬಿಜೆಪಿ ಯಾವುದೇ ಪಕ್ಷದವರು ಭಾಗಿಯಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಿರಂಗಪಡಿಸಲಿ. ಸತ್ಯ ಜನರಿಗೆ ಗೊತ್ತಾಗಲಿ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

‘ನಾನು ತನಿಖಾ ಸಂಸ್ಥೆಗೆ ಸಾಕ್ಷಿ ಕೊಡುವುದಾದರೆ ತನಿಖೆ ಏಕೆ ಬೇಕು? ಕಾನೂನುಬಾಹಿರ ಕೃತ್ಯ ನಡೆಯದೇ ಇದ್ದರೆ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿಯವರು ಜಾರಿ ನಿರ್ದೇಶನಾಲಯಕ್ಕೆ ವಹಿಸಿದ್ದು ಏಕೆ? ತನಿಖೆ ನಡೆಯುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.