ADVERTISEMENT

ಆತ್ಮಹತ್ಯೆ ಬೇಡ, ಆರಗ ಅವರು ಆತ್ಮಸಾಕ್ಷಿಗೆ ತಕ್ಕಂತೆ ನಡೆಯಲಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 14:42 IST
Last Updated 16 ಜನವರಿ 2023, 14:42 IST
   

ರಾಮನಗರ: ಗೃಹ ಸಚಿವ ಆರಗ ಜ್ಞಾನೇಂದ್ರ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಅವರು ತಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಸಾಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ‘ ಲಂಚ ತೆಗೆದುಕೊಂಡಿದ್ದು ಸಾಬೀತಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗೃಹ ಸಚಿವರು ಹೇಳಿದ್ದಾರೆ. ನಾನೇನು ಅವರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಹೇಳಿಲ್ಲ. ಲಂಚ ಪಡೆದಿರುವುದನ್ನು ಸಾಬೀತು ಪಡಿಸಲು ಆಗದು’ ಎಂದರು.

‘ ಸ್ಯಾಂಟ್ರೊ ರವಿ ಎಂಬಾತ ಸುಮಾರು 150 ಪೊಲೀಸ್ ಅಧಿಕಾರಿಗಳಿಂದ ದುಡ್ಡು ವಸೂಲಿ ಮಾಡಿದ್ದಾನೆ. ನಿಮ್ಮ ಚೇಂಬರ್‌ನಲ್ಲಿ ಆತ ಜೊತೆಗಿರುವ ಎರಡು ಫೋಟೊಗಳು ಇವೆ. ಯಾತಕ್ಕೆ ಇಂತವರನ್ನು ಸೇರಿಸಿಕೊಂಡಿರಿ. ಅವನು ಏನು‌ ನಡೆಸಿಕೊಂಡು ಬಂದಿದ್ದಾನೆ ಇವರಿಗೆ ಗೊತ್ತಿಲ್ಲವ’ ಎಂದು ಪ್ರಶ್ನಿಸಿದರು.

ADVERTISEMENT

ಕಾಂಗ್ರೆಸ್ ನವರು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಮಹಿಳೆಯರಿಗೆ ತಿಂಗಳಿಗೆ ₹2 ಸಾವಿರ ಕೊಡುತ್ತೇವೆ ಎಂದಿದ್ದಾರೆ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ದುಡಿಯುವವರ ಕೈ ಬಲಪಡಿಸುವ ಕೆಲಸ ಮಾಡಬೇಕು. ಕೆಲವರು ಚುನಾವಣೆ ಬಂದರೆ ಸೀರೆ, ಕುಕ್ಕರ್ ಹಂಚುತ್ತಾರೆ. ನಮ್ಮ ಪಕ್ಷದ ಯೋಜನೆಗಳು ಹಾಗಲ್ಲ. ಮುಂದಿನ 5 ವರ್ಷವೂ ಪ್ರಗತಿ ಕಾರ್ಯಕ್ರಮಗಳು ಜಾರಿಯಲ್ಲಿ ಇರುತ್ತವೆ. ಮುಖ್ಯವಾಗಿ ಇಲಾಖೆಗಳಲ್ಲಿನ ಪರ್ಸೆಂಟೇಜ್‌ ಲೆಕ್ಕ ನಿಲ್ಲಿಸುವ ಕಾರ್ಯ ಆಗಲಿದೆ ಎಂದರು.

ಸಂವಾದ: ‘ರೈತ ಸಂಕ್ರಾಂತಿ’ ಕಾರ್ಯಕ್ರಮದ ಅಂಗವಾಗಿ ಸೋಮವಾರ ಮಧ್ಯಾಹ್ನ ಕುಮಾರಸ್ವಾಮಿ 58 ತಾಲ್ಲೂಕಿನ ಸಾವಿರಾರು ರೈತರ ಜೊತೆ ಆನ್‌ಲೈನ್‌ ಮೂಲಕ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.