ADVERTISEMENT

3-4 ಶಾಸಕರು ಹೊರ ಹೋದರೆ ಏನೂ ಆಗುವುದಿಲ್ಲ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 2:23 IST
Last Updated 28 ಫೆಬ್ರುವರಿ 2020, 2:23 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ    

ರಾಮನಗರ: ‘ಯಾರೋ ಮೂರು, ನಾಲ್ಕು ಶಾಸಕರು ಹೊರ ಹೋದ ಮಾತ್ರಕ್ಕೆ ಪಕ್ಷಕ್ಕೇನೂ ಆಗುವುದಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಶಾಸಕರ ಸಭೆಗೆ ಕೆಲವರು ಗೈರಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜಕಾರಣದಲ್ಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಸಾಮಾನ್ಯ’ ಎಂದರು.

‘ಕಾಂಗ್ರೆಸ್, ಬಿಜೆಪಿ ಯಾವ ಕ್ಷೇತ್ರಗಳಲ್ಲಿ ಶಕ್ತಿ ಬೆಳೆಸಿಕೊಳ್ಳಲು ಆಗಲಿಲ್ಲವೋ ಅಲ್ಲಿ ನಮ್ಮ ಶಾಸಕರ ತಲೆ ಕೆಡಿಸಿ ಕರೆದುಕೊಂಡು ಪಕ್ಷ ಬೆಳೆಸಲು ಹೊರಟಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಹೊಸ ನಾಯಕನನ್ನು ಹುಡುಕಿಕೊಳ್ಳುತ್ತಾರೆ’ ಎಂದರು. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ‘ದೆಹಲಿಯಲ್ಲಿ ಗಲಭೆ ನಡೆದು ಅಮಾಯಕರು ಬಲಿಯಾದರು. ಈ ಬಗ್ಗೆ ನ್ಯಾಯಮೂರ್ತಿಗಳು ಕೇಂದ್ರದ ವಿರುದ್ಧ ಪ್ರತಿಕ್ರಿಯೆ ನೀಡಿದ್ದರು. ಅದಕ್ಕಾಗಿ ವರ್ಗಾವಣೆ ಮಾಡಿದ್ದಾರೆ’ ಎಂದರು.

ADVERTISEMENT

'ಬಿಜೆಪಿಯವರು ಒಂದು ಕಡೆ ಟ್ರಂಪ್ ರನ್ನು ಕರೆದುಕೊಂಡು ಬಂದು ಗುಜರಾತಿ‌ನಲ್ಲಿ ಮೆರವಣಿಗೆ ಮಾಡುತ್ತಾರೆ. ಮತ್ತೊಂದೆಡೆ ದೆಹಲಿಯಲ್ಲಿ ಗಲಭೆ ಆಗುತ್ತದೆ. ಇವರು ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳಲು ಹೊರಟಿದ್ದಾರೆ. ಇದು ಹಿಂದೂ ರಾಷ್ಟ್ರ ವೇ, ಬಿಜೆಪಿಯವರು ಹೊಸದಾಗಿ ಮಾಡಬೇಕಿಲ್ಲ. ಕಾಲಚಕ್ರ ಬದಲಾದಂತೆ ಜನರು ಎಲ್ಲರನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದರು.

ದೊರೆಸ್ವಾಮಿ ಬಗ್ಗೆ ಶಾಸಕ ಯತ್ನಾಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿ 'ದೊರೆಸ್ವಾಮಿ ಹೋರಾಟ ಮಾಡಿದಾಗ ಇವರು ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ಯಾವ್ದೊ ಆರ್ ಎಸ್ ಎಸ್ ಫಲಕ , ತಿಲಕ ಇಟ್ಟುಕೊಂಡು ಬಂದವೆ. ಆಟಾಡ್ತಾವೆ. ಆಡಲಿ ಬನ್ನಿ' ಎಂದರು.

ಸಚಿವ ನಾರಾಯಣ ಗೌಡ ಮಹಾರಾಷ್ಟ್ರ ಕ್ಕೆ ಜೈಕಾರ ಹಾಕಿದ ಕುರಿತು ಮಾತನಾಡಿ ' ಮಹಾರಾಷ್ಟ್ರದ ತಾಕತ್ತು ದೊಡ್ಡದ, ಮಂಡ್ಯ ತಾಕತ್ತು ದೊಡ್ಡದ ಎಂದು ಮುಂದೆ ಜನರೇ ತೀರ್ಮಾನ ಮಾಡುತ್ತಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.