ಬೆಂಗಳೂರು:‘ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್ ಮಂಡಿಸಲು ಯಡಿಯೂರಪ್ಪ ಅಡ್ಡಿ ಮಾಡಿದ್ದರು. ಆಗ ಅವರಿಗೆ ಬಜೆಟ್ ಮಂಡನೆಗೆ ನಾನೇ ಮುಹೂರ್ತ ಇಟ್ಟುಕೊಟ್ಟಿದ್ದೆ’ ಎಂದು ಎಚ್.ಡಿ.ರೇವಣ್ಣ ಅವರು ಹೇಳಿ ಎಲ್ಲರನ್ನೂ ಅಚ್ಚರಿಗೆ ಕೆಡವಿದರು.
ವಿಶ್ವಾಸಮತ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಶೆಟ್ಟರ್ ಅವರಿಗೆ ಬಜೆಟ್ ಮಂಡನೆಗೆ ಅವಕಾಶ ಕೊಡುವುದಿಲ್ಲ ಎಂದು ಯಡಿಯೂರಪ್ಪ ಪಟ್ಟು ಹಿಡಿದು ಕುಳಿತಿದ್ದರು. ನಾನು ಡೇಟ್ ಇಟ್ಟು ಕೊಡುತ್ತೇನೆ, ಯಾಕೆ ಅಂಗೀಕಾರ ಆಗುವುದಿಲ್ಲ ನೋಡೋಣ ಎಂದು ಅವರಿಗೆ ಹೇಳಿದ್ದೆ. ಆ ಬಳಿಕ ಬಜೆಟ್ ಮಂಡಿಸಿದರು’ ಎಂಬುದಾಗಿ ವಿವರಿಸಿದರು.
‘ಕುಮಾರಸ್ವಾಮಿ ಅಧಿಕಾರದಿಂದ ನಿರ್ಗಮಿಸುವುದರಿಂದ ಕುಮಾರಸ್ವಾಮಿಗೆ ನಷ್ಟ ಇಲ್ಲ. ಬಡವರಿಗೆ ನಷ್ಟ ಆಗುತ್ತದೆ’ ಎಂದೂ ರೇವಣ್ಣ ಹೇಳಿದರು.
‘ಪ್ರಾಮಾಣಿಕವಾಗಿ ಇರುವವರಿಗೆ ವಚನ ಭ್ರಷ್ಟರು ಎನ್ನುತ್ತೀರಲ್ಲ. ಬೋಪಯ್ಯ ಅವರ ಹಾಗೆ ನಡೆದುಕೊಂಡರೆ ನೀವು ವಚನ ಭ್ರಷ್ಟರು ಆಗುತ್ತಿರಲಿಲ್ಲ’ ಎಂದು ಸಭಾಧ್ಯಕ್ಷರನ್ನು ಉದ್ದೇಶಿಸಿ ರೇವಣ್ಣ ನುಡಿದರು.
‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ್ರೆ ಅವರನ್ನು ಹೇಗೆ ಕಂಟ್ರೋಲ್ಗೆ ತಗೋಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಹೇಳಿದಾಗ ಸದನದಲ್ಲಿ ನಗುವಿನ ಅಲೆ ಹೊಮ್ಮಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.