ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವೇತನದಲ್ಲಿ ಯತಾಸ್ಥಿತಿ ಕಾಪಾಡುವಂತೆ ಎನ್ಎಚ್ಎಂ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘವು ಸಿಬ್ಬಂದಿಯ ವೇತನ ಹೆಚ್ಚಳ, ಬೋನಸ್ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಈ ಹಿಂದೆ ಪ್ರತಿಭಟನೆ ನಡೆಸಿತ್ತು. ಬಳಿಕ ಆರೋಗ್ಯ ಇಲಾಖೆಯ ಸಚಿವರ ಜತೆಗೆ ಈ ಬಗ್ಗೆ ಸಂಘದ ಪ್ರಮುಖರು ಸಭೆ ನಡೆಸಿದ್ದರು. ಆದರೆ, ಡಿಸೆಂಬರ್ ತಿಂಗಳ ವೇತನವನ್ನು ತಡೆ ಹಿಡಿದಿದ್ದ ಎನ್ಎಚ್ಎಂ, ಜ.5ಕ್ಕೆ ಪರಿಷ್ಕೃತ ವೇತನ ನೀಡುವಂತೆ ಆದೇಶಿಸಿತ್ತು.ಬೋನಸ್ ಜತೆಗೆ ವೇತನ ನೀಡಲಾದರೂ ಕೆಲವರ ಮೂಲ ವೇತನವನ್ನು ಇಳಿಕೆ ಮಾಡಲಾಗಿತ್ತು. ಇದೀಗ ಈ ಮೊದಲಿನ ವೇತನವನ್ನೇ ನೀಡುವಂತೆ ಆದೇಶಿಸಲಾಗಿದೆ.
‘ವೇತನದಲ್ಲಿನ ಸಮಸ್ಯೆಯನ್ನು ನಿವಾರಿಸಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿರುವುದಕ್ಕೆ ಧನ್ಯವಾದಗಳು.ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಎನ್ಎಚ್ಎಂ ಈಡೇರಿಸುವ ವಿಶ್ವಾಸವಿದೆ’ ಎಂದು ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಎಚ್.ಯಮೋಜಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.