ADVERTISEMENT

ಮಲೆನಾಡು, ಕಲ್ಯಾಣ ಕರ್ನಾಟಕದಲ್ಲಿ ಭಾರಿ ಮಳೆ; 5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’

ಚಿಕ್ಕಮಗಳೂರು, ಕೊಡಗು ಜಿಲ್ಲೆ: ಶಾಲೆ, ಕಾಲೇಜಿಗೆ ರಜೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 14:52 IST
Last Updated 17 ಆಗಸ್ಟ್ 2025, 14:52 IST
ಶೃಂಗೇರಿಯಲ್ಲಿ ತುಂಗಾ ನದಿ ಮೈದುಂಬಿ ಹರಿಯಿತು  –ಚಿತ್ರ: ಕೆ.ಎನ್.ರಾಘವೇಂದ್ರ
ಶೃಂಗೇರಿಯಲ್ಲಿ ತುಂಗಾ ನದಿ ಮೈದುಂಬಿ ಹರಿಯಿತು  –ಚಿತ್ರ: ಕೆ.ಎನ್.ರಾಘವೇಂದ್ರ   

ಬೆಂಗಳೂರು: ರಾಜ್ಯದ ಚಿಕ್ಕಮಗಳೂರು, ಕೊಡಗು ಹಾಗೂ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ.

ಮಳೆಯ ಅಬ್ಬರಕ್ಕೆ ಮಲೆನಾಡಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕುದುರೆ ಮುಖ ಭಾಗದಲ್ಲಿ ಭಾರಿ ಮಳೆ ಇದ್ದು, ತುಂಗಾ ನದಿ ಮೈದುಂಬಿ ಹರಿಯುತ್ತಿದೆ.

ಶೃಂಗೇರಿ ಪಟ್ಟಣದ ಗಾಂಧಿ ಮೈದಾನ, ದೇಗುಲದ ವಾಹನ ನಿಲುಗಡೆ ತಾಣದಲ್ಲಿದ್ದ ವಾಹನಗಳು ನೀರಿನಲ್ಲಿ ಮುಳುಗಿವೆ. ಆಸುಪಾಸಿನ ಜಮೀನು, ತೋಟಗಳಿಗೆ ನೀರು ನುಗ್ಗಿದೆ.

ADVERTISEMENT

ಕೊಪ್ಪ, ಕಳಸ, ಎನ್.ಆರ್.ಪುರ, ಮೂಡಿಗೆರೆ ವ್ಯಾಪ್ತಿಯಲ್ಲಿ ಜೋರು ಮಳೆ ಇದೆ. ಚಾರ್ಮಾಡಿ ಘಾಟಿಯಲ್ಲಿ ಜೋರು ಮಳೆಯಿಂದಾಗಿ ವಾಹನ ಸವಾರರು ಪರದಾಡಿದರು. 

ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲ್ಲೂಕು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಐದು ಹೋಬಳಿ ವ್ಯಾಪ್ತಿಯಲ್ಲಿ ಶಾಲೆ, ಅಂಗನವಾಡಿ ಮತ್ತು ಶಿಶುಪಾಲನಾ ಕೇಂದ್ರಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

ಕೊಡಗಿನಲ್ಲಿ ಆರೆಂಜ್‌ ಅಲರ್ಟ್‌: ಕೊಡಗು ಜಿಲ್ಲೆಯ ಮಡಿಕೇರಿ ನಗರ, ವಿರಾಜಪೇಟೆ ಭಾಗಗಳಲ್ಲಿ ಮಳೆ ಬಿರುಸಾಗಿದೆ. ಸೋಮವಾರ ಶಾಲೆ,ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಮಡಿಕೇರಿ ತಾಲ್ಲೂಕಿನ ಹೆರವನಾಡುನಲ್ಲಿ ವಿದ್ಯುತ್ ಕಂಬ ಬಿದ್ದು, ಕೊಟ್ಟಿಗೆ  ಸಂಪೂರ್ಣ ಹಾನಿಯಾಗಿದೆ. ಶ್ರೀಮಂಗಲ ಮತ್ತು ಕೊಡ್ಲಿಪೇಟೆಯಲ್ಲಿ ತಲಾ 8 ಸೆಂ.ಮೀ., ಸಂಪಾಜೆ, ಶನಿವಾರಸಂತೆ, ಶಾಂತಳ್ಳಿಯಲ್ಲಿ ತಲಾ 7.6 ಸೆಂ.ಮೀ., ಮಡಿಕೇರಿ 5.5, ಭಾಗಮಂಡಲ, ನಾಪೋಕ್ಲು, ವಿರಾಜಪೇಟೆ, ಹುದಿಕೇರಿಯಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ.

ಕಲಬುರಗಿ, ಯಾದಗಿರಿಯಲ್ಲಿ ಭಾರಿ ಮಳೆ: ಕಲ್ಯಾಣ ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧೆಡೆ ಭಾನುವಾರ ಉತ್ತಮ ಮಳೆ ಸುರಿಯಿತು. ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಮೇಲೆ ನೀರು ಹರಿಯಿತು.

ಶಿವಮೊಗ್ಗ ವರದಿ: ಜಿಲ್ಲೆಯ ವಿವಿಧೆಡೆ ಇಡೀ ದಿನ ಮಳೆ ಇದ್ದು, ತುಂಗ–ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ತುಂಗಾ ಜಲಾಶಯ ಭರ್ತಿ ಆಗಿದೆ.

ದಾವಣಗೆರೆ ನಗರದಲ್ಲೂ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೂ ಬಿಟ್ಟು ಬಿಟ್ಟು ವರ್ಷಧಾರೆಯಾಗಿದೆ. ಚಿತ್ರದುರ್ಗ ನಗರದಲ್ಲಿ ಸೋನೆ ಮಳೆಯಾಗುತ್ತಿದೆ. ಮೊಳಕಾಲ್ಮುರು ತಾಲ್ಲೂಕಿನಾದ್ಯಂತ ಸೋನೆ ಹಾಗೂ ಆಗಾಗ ಜೋರಾಗಿ ಸುರಿಯುತ್ತಿದೆ. 

5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಧಾರಾಕಾರ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ

ಸೋಮವಾರ ಐದು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಹಾಗೂ ನಾಲ್ಕು ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್’ ಘೋಷಿಸಿದೆ.

ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ‘ರೆಡ್‌ ಅಲರ್ಟ್’ ನೀಡಲಾಗಿದೆ.  

ಕಲಬುರಗಿ ವಿಜಯಪುರ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.  ಮೀನುಗಾರರು ಸಮುದ್ರಕ್ಕೆ ಹೋಗಬಾರದು ಎಂದು ಇಲಾಖೆ ಎಚ್ಚರಿಸಿದೆ.    ಬೆಂಗಳೂರಿನಲ್ಲಿ ಒಂದು ವಾರ ಮೋಡ ಕವಿದ ವಾತಾವರಣ ಇರಲಿದ್ದು ಸಾಧಾರಣ ಮಳೆ ಆಗಬಹುದು. ಕರಾವಳಿ ಸೇರಿ ವಿವಿಧೆಡೆ ಮಂಗಳವಾರ ಮತ್ತು ಬುಧವಾರವೂ ಭಾರಿ ಮಳೆ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.