ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ (ಸಾಂದರ್ಭಿಕ ಚಿತ್ರ)
ಬೆಂಗಳೂರು: ವಿವಾದಿತ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗೆ ಅನ್ಯಾಯವಾಗುತ್ತಿದ್ದು, ತಕ್ಷಣ ಯೋಜನೆಯ ಕಾಮಗಾರಿಯನ್ನು ನಿಲ್ಲಿಸುವಂತೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ವೈಜ್ಞಾನಿಕವಾಗಿ ಅಧ್ಯಯನಗೊಂಡ ಮೂಲ ಯೋಜನೆ ಹಾಗೂ ಅನುಮೋದಿತ ಡಿ.ಪಿ.ಆರ್. ವರದಿಯಂತೆ ತುಮಕೂರು ಶಾಖಾ ಕಾಲುವೆ 70.36 ಕಿ.ಮೀನಲ್ಲಿ ನೀರಿನ ಹರಿವು ಒಟ್ಟು ಸುಮಾರು 1289 ಕ್ಯೂಸೆಕ್ ಆಗಿದೆ.
ಈ ಪೈಕಿ ತುರುವೆಕೆರೆ, ಗುಬ್ಬಿ, ತುಮಕೂರು ಹಾಗೂ ತುಮಕೂರು ಗ್ರಾಮಾಂತರ ಪ್ರದೇಶಗಳ 96ಕಿ.ಮೀ. ಉದ್ದದ ಈ ಭಾಗಕ್ಕೆ 901 ಕ್ಯೂಸೆಕ್ ನೀರಿನ ಹರಿವು ಹಂಚಿಕೆಯಾಗಿದೆ. ಅಲ್ಲದೇ ಕುಣಿಗಲ್ ತಾಲ್ಲೂಕಿಗೆ 388 ಕ್ಯೂಸೆಕ್ ನೀರು ಹಂಚಿಕೆಯಾಗಿರುತ್ತದೆ. ಈ ಯೋಜನೆಯಲ್ಲಿ ಲಭ್ಯವಿರುವ ಸಂಪೂರ್ಣ ನೀರನ್ನು ಈಗಾಗಲೇ ಹಂಚಿಕೆ ಮಾಡಲಾಗಿದ್ದು, ಪ್ರಸ್ತಾವಿತ ಯೋಜನೆಯ ಮೂಲಕ ಇತರ ಪ್ರದೇಶಕ್ಕೆ ನೀರು ಸರಬರಾಜು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆ ತುಮಕೂರಿನ ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಹಂಚಿಕೆಯಾದ 901 ಕ್ಯೂಸೆಕ್ ನೀರಿನ ಹರಿವಿಗೆ ಧಕ್ಕೆ ತಂದು ರಾಜ್ಯದ ನೀರಾವರಿ ಸಚಿವರ ತವರು ಜಿಲ್ಲೆಗೆ ನೀರು ಹರಿಸುವ ಅವೈಜ್ಞಾನಿಕ ಕಾರ್ಯಯೋಜನೆ ಇದಾಗಿದೆ.
ಕರ್ನಾಟಕ ಸರ್ಕಾರ ಅವೈಜ್ಞಾನಿಕವಾಗಿ ಹೊರತರುತ್ತಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಈ ಯೋಜನೆಯು ತುಮಕೂರು ಜಿಲ್ಲೆಯ ತುರುವೆಕೆರೆ, ಗುಬ್ಬಿ, ತುಮಕೂರು (ಗ್ರಾಮಾಂತರ) ಹಾಗೂ ತುಮಕೂರು (ನಗರ) ಭಾಗದ ಜನ ಸಾಮಾನ್ಯರ ಹಾಗೂ ಜಿಲ್ಲೆಯ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಲಿದೆ. ಈ ಕೆನಾಲ್ ನಿರ್ಮಾಣದಿಂದ ಹೈಡ್ರಾಲಿಕ್ ಹೆಡ್ ಕುಸಿದು ಸಕಾಲದಲ್ಲಿ ನೀರು ಪೂರೈಕೆಯಲ್ಲಿ ಕೊರತೆಯಾಗುವ ಆತಂಕವನ್ನು ಈ ಭಾಗದ ಮುಗ್ಧ ರೈತರು ಹಾಗೂ ತಾಂತ್ರಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ರಾಜ್ಯ ಸರ್ಕಾರ ಈ ಬಗ್ಗೆ ಮೃದು ಧೋರಣೆ ತಾಳಿರುವುದು ಖಂಡನೀಯ.
ತುಮಕೂರು ಜಿಲ್ಲೆಯ ಅವಿಭಾಜ್ಯ ಅಂಗವಾದ ಕುಣಿಗಲ್ ಭಾಗಕ್ಕೆ ಹಂಚಿಕೆಯಾದ ನೀರಿನ ಹರಿವಿಗೆ ಧಕ್ಕೆ ತಂದು ಈ ಭಾಗದ ರೈತರಿಗೂ ಅನ್ಯಾಯ ಉಂಟು ಮಾಡುವ ರಾಜ್ಯ ಸರ್ಕಾರದ ಈ ಕ್ರಮ ಅಸಂಬದ್ಧವಾಗಿದೆ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.