ADVERTISEMENT

ಡ್ರಗ್ಸ್‌ ಜಾಲ ಭೇದಿಸಲು ‘ಚಾಣಕ್ಯ’ ನೀತಿ ಅನುಸರಿಸಿ

ತನಿಖಾ ಸಂಸ್ಥೆಗಳಿಗೆ ಹೈಕೋರ್ಟ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 20:55 IST
Last Updated 24 ಸೆಪ್ಟೆಂಬರ್ 2020, 20:55 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಡ್ರಗ್ಸ್ ಜಾಲವನ್ನು ಬೇರು ಸಹಿತ ಕಿತ್ತೊಗೆಯಲು ತನಿಖಾ ಸಂಸ್ಥೆಗಳು ಚಾಣಕ್ಯ ನೀತಿ ಅನುಸರಿಸುವ ಅಗತ್ಯಇದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಎನ್‌ಸಿಬಿ(ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ) ಅಧಿಕಾರಿಗಳು ವ್ಯಕ್ತಿಯೊಬ್ಬರಿಂದ 15.55 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದ ಪ್ರಕರಣವನ್ನು ಪೂರಕ ದಾಖಲೆಗಳಿಲ್ಲದ ಕಾರಣಕ್ಕೆ ರದ್ದುಪಡಿಸಿದ ನ್ಯಾಯಮೂರ್ತಿ ಬಿ.ಎ. ಪಾಟೀಲ, ತನಿಖೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

‘ಡ್ರಗ್ಸ್ ಜಾಲದ ಭೀತಿ ಸಮಾಜದ ಮೇಲೆ ಅದರಲ್ಲೂ ವಿಶೇಷವಾಗಿ ಯುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದನ್ನು ಬುಡಸಮೇತ ಕಿತ್ತೆಸೆಯಲು ಚಾಣಕ್ಯನ ರೀತಿಯ ದೃಢ ಮನಸ್ಸು ಇರಬೇಕು’ ಎಂದು ಹೇಳಿದರು.

ADVERTISEMENT

2013ರ ಆಗಸ್ಟ್ 27ರಂದು ಅಬ್ದುಲ್ ಅಲೀಮ್ ಎಂಬುವರನ್ನು ಬಂಧಿಸಿದ್ದ ಎನ್‌ಸಿಬಿ ಪೊಲೀಸರು, 15.55 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದರು. ಈ ಪ್ರಕರಣ ಕೈಬಿಡುವಂತೆ ಅಬ್ದುಲ್ ಅಲೀಮ್ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ಹಸ್ಮತ್‌ ಪಾಷಾ, ‘ವಶಪಡಿಸಿಕೊಂಡಿರುವುದು 15.55 ಕೆಜಿ ಗಾಂಜಾ ಎಂದು ಮಾತ್ರ ಹೇಳಲಾಗಿದೆ. ಗಾಂಜಾ ಗಿಡದಲ್ಲಿದ್ದ ಬೀಜ, ಕಡ್ಡಿ ಮತ್ತು ಎಲೆಯನ್ನು ಪ್ರತ್ಯೇಕಿಸಿಲ್ಲ. ಅದರಲ್ಲಿದ್ದಹೂವಿನ ಅಂಶ ಎಷ್ಟು, ಮೊಗ್ಗಿನ ಅಂಶ ಎಷ್ಟು ಎಂಬುದನ್ನು ದಾಖಲಿಸಿಲ್ಲ. ಅದರಲ್ಲಿಟೆಟ್ರೊಹೈಡ್ರೊಕೆನಾಬಿನಾಲ್ (ಗಾಂಜಾ ಗಿಡದಲ್ಲಿರುವ ಪ್ರಮುಖ ಸಕ್ರಿಯ ಘಟಕಾಂಶ) ಅಂಶ ಎಷ್ಟಿದೆ ಎಂಬುದನ್ನೂ ಹೇಳಿಲ್ಲ. ಹೀಗಾಗಿ, ಪ್ರಕರಣ ಎನ್‌ಡಿಪಿಎಸ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ವಾದಿಸಿದರು.

ಪಂಚನಾಮೆ ಸರಿಯಾಗಿ ಮಾಡದ ಕಾರಣ ಗಾಂಜಾ ಅಂಶ ಯಾವ ಪ್ರಮಾಣದಲ್ಲಿ ಇತ್ತು ಎಂಬುದನ್ನು ಗುರುತಿಸಲು ಆಗುತ್ತಿಲ್ಲ.ಈ ಪ್ರಕರಣದ ವಿಚಾರಣೆ ಮುಂದುವರಿಸಿದರೆ ನ್ಯಾಯಾಲಯದ ಸಮಯ ವ್ಯರ್ಥವಾಗಲಿದೆ ಎಂದು ಅಭಿಪ್ರಾಯಪಟ್ಟ ಪೀಠ, ಪ್ರಕರಣ ವಜಾಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.