ADVERTISEMENT

ಸಮಾನ ವೇತನ ಪಡೆದವರೆಲ್ಲ ಸಚಿವರಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 19:12 IST
Last Updated 27 ನವೆಂಬರ್ 2020, 19:12 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತೇಜನ ನೀಡಲು ನಿರಾಕರಿಸಿರುವ ಹೈಕೋರ್ಟ್, ‘ಸಚಿವರಿಗೆ ಸಮನಾದ ವೇತನ ಮತ್ತು ಭತ್ಯೆ ಪಡೆದ ಕಾರಣಕ್ಕೆ ಅವರು ಸಚಿವರಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ವಕೀಲ ಕೆ.ಬಿ. ವಿಜಯಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಸಂವಿಧಾನದ ಪ್ರಕಾರ, ಸಚಿವರ ಸಂಖ್ಯೆ ಶಾಸಕರ ಸಂಖ್ಯೆಯಲ್ಲಿ ಶೇ 15ನ್ನು ಮೀರುವಂತಿಲ್ಲ. ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದ 28 ಸಂಪುಟ ದರ್ಜೆ ಸಚಿವರಿದ್ದು, ನಿಗಮ ಮತ್ತು ಮಂಡಳಿಗಳಿಗೆ ಈಗ ನೇಮಕ ಮಾಡುತ್ತಿರುವ ಅಧ್ಯಕ್ಷರಿಗೂ ಸಚಿವ ಸಮಾನ ವೇತನ ನೀಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಅವರನ್ನೂ ಮಂತ್ರಿಗಳಾಗಿಯೇ ಪರಿಗಣಿಸಬೇಕಾಗುತ್ತದೆ. ಸದ್ಯ ರಾಜ್ಯದಲ್ಲಿ ಮಂತ್ರಿಗಳ ಸಂಖ್ಯೆ ಸಂವಿಧಾನದ ನಿಗದಿಪಡಿಸಿರುವ ಶೇಕಡವಾರು ಸಂಖ್ಯೆಯನ್ನು ಮೀರುತ್ತಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

ADVERTISEMENT

‘ಸಚಿವರಿಗೆ ಸಮನಾದ ವೇತನ ಮತ್ತು ಭತ್ಯೆ ನೀಡಿದ ಕಾರಣಕ್ಕೆ ಅವರು ಮಂತ್ರಿಗಳಾಗುವುದಿಲ್ಲ. ಅಧ್ಯಕ್ಷರುಗಳಿಗೆ ವೇತನ ಮತ್ತು ಭತ್ಯೆ ನಿಗದಿ ಮಾಡುವ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.