ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ(ಕೆಎಸ್ಪಿಸಿಬಿ) ಅಧ್ಯಕ್ಷರ ನೇಮಕ ಪ್ರಕ್ರಿಯೆ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಅಧ್ಯಕ್ಷರ ಅರ್ಹತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ಅಂತಿಮ ಆದೇಶಕ್ಕೆ ಈ ಪ್ರಕ್ರಿಯೆ ಒಳಪಡಲಿದೆ ಎಂದು ಹೇಳಿದೆ.
ಅಧ್ಯಕ್ಷರ ಸ್ಥಾನಕ್ಕೆ ನೇಮಕ ಆಗಿರುವ ವ್ಯಕ್ತಿಯ ಹೆಸರನ್ನು ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿತು. 2020ರ ಜುಲೈನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಸಾರ್ವಜನಿಕ ಪ್ರಕಟಣೆ ಹೊರಡಿಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಎಂದು ವಿವರಿಸಿತು. ಸರ್ಕಾರದ ಆಯ್ಕೆ ಪರಿಶೀಲಿಸಿದ ಪೀಠ, ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು ಎಂದು ತಿಳಿಸಿತು.
ಅಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲಿ ಅವರ ವಿದ್ಯಾರ್ಹತೆ ಮತ್ತು ಅನುಭವದ ಅರ್ಹತೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪರಿಗಣಿಸದೆ ನೇಮಕ ಪ್ರಕ್ರಿಯೆ ನಡೆಸಲಾಗಿದೆ ಎಂದು ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪೀಠ ವಿಚಾರಣೆ ನಡೆಸುತ್ತಿದೆ.
ಅಧ್ಯಕ್ಷರಾಗುವವರಿಗೆ ಪರಿಸರಕ್ಕೆ ಸಂಬಂಧಿಸಿದ ಯಾವುದಾದರೂ ಸಂಸ್ಥೆಯನ್ನು ನಿರ್ವಹಿಸಿದ ಅನುಭವ ಇರಬೇಕಾಗುತ್ತದೆ. ಎಲ್ಲಾ ಅರ್ಹತೆ ಇರುವಂತೆ ನೋಡಿಕೊಂಡು ನೇಮಕ ಪ್ರಕ್ರಿಯೆ ಹೊಸದಾಗಿ ಆರಂಭಿಸುವಂತೆ 2021ರ ಫೆಬ್ರುವರಿಯಲ್ಲಿ ಪೀಠ ತಿಳಿಸಿತ್ತು. ಆದರೂ, 2020ರ ಜುಲೈನ್ನಲ್ಲಿ ಹೊರಡಿಸಿರುವ ಪ್ರಕಟಣೆಯಂತೆ ಈಗಾಗಲೇ ಹುದ್ದೆಗೆ ಆಯ್ಕೆ ಮಾಡಿರುವ ವ್ಯಕ್ತಿ ಈ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.