ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
ಬೆಂಗಳೂರು: ‘ಮಾರ್ಚ್ 1ರಿಂದ ಆರಂಭವಾಗಲಿರುವ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಮ್ಮ ಚಲನಚಿತ್ರಗಳನ್ನು ಪರಿಗಣಿಸಿಲ್ಲ’ ಎಂದು ‘ಸಂವಿಧಾನ ಸಿನಿ ಕಂಬೈನ್ಸ್’ ಸೇರಿದಂತೆ ಒಂಬತ್ತು ಸಿನಿಮಾ ನಿರ್ಮಾಪಕರು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಕನ್ನಡ ಚಲನಚಿತ್ರ ಅಕಾಡೆಮಿಗೆ ತುರ್ತು ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶಿಸಿದೆ.
ತುಮಕೂರಿನ ‘ಸಂವಿಧಾನ ಸಿನಿ ಕಂಬೈನ್ಸ್’ನ ಎ.ವಿ.ನಾಗರಾಜು (ಟೈಗರ್ ನಾಗ್) ಸೇರಿ ಒಂಬತ್ತು ಪ್ರತ್ಯೇಕ ಸಂಸ್ಥೆಗಳ ನಿರ್ಮಾಪಕರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ‘ಅರ್ಜಿದಾರರು ಚಿತ್ರಗಳನ್ನು ಆಯ್ಕೆ ಸಮಿತಿ ವೀಕ್ಷಿಸಿಲ್ಲ. ಹೊಸದಾಗಿ ಸಮಿತಿ ರಚಿಸಬೇಕು’ ಎಂದು ಕೋರಿದರು.
ಇದಕ್ಕೆ ನ್ಯಾಯಪೀಠ, ‘ಚಲನಚಿತ್ರೋತ್ಸವಕ್ಕೆ ಈಗಾಗಲೇ ಸಿದ್ಧತೆ ಆಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಲಾಗದು’ ಎಂದು ಪ್ರತಿಕ್ರಿಯಿಸಿತು.. ಇದೇ 24ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.