ADVERTISEMENT

ಹೆಣ್ಣುಮಕ್ಕಳನ್ನು ಗೃಹಕೈಗಾರಿಕೆಗೆ ಪ್ರೋತ್ಸಾಹಿಸಿದ ಹಳ್ಳಿ ಮಹಿಳೆಯ ‘ಅರ್ಥಕ್ರಾಂತಿ’

ಸಣ್ಣ ಊರಿನಲ್ಲಿ ನಡೆಯುತ್ತಿದೆ ತಿಂಗಳಿಗೆ ಸುಮಾರು ₹1 ಕೋಟಿ ವಹಿವಾಟು

ಈರಪ್ಪ ಹಳಕಟ್ಟಿ
Published 14 ಅಕ್ಟೋಬರ್ 2018, 19:35 IST
Last Updated 14 ಅಕ್ಟೋಬರ್ 2018, 19:35 IST
ಮನೆಯಲ್ಲಿ ಸಂಡಿಗೆ ಪ್ಯಾಕಿಂಗ್ ಮಾಡುತ್ತಿರುವ ಗಂಗಲಕ್ಷ್ಮಮ್ಮ
ಮನೆಯಲ್ಲಿ ಸಂಡಿಗೆ ಪ್ಯಾಕಿಂಗ್ ಮಾಡುತ್ತಿರುವ ಗಂಗಲಕ್ಷ್ಮಮ್ಮ   

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕಲ್ಲೂಡಿ ಎಂಬ ಪುಟ್ಟ ಹಳ್ಳಿಯ ಬಹುತೇಕರು ಮಳೆಯ ಜೂಜಾಟದಿಂದಾಗಿ ಕೃಷಿಯಿಂದ ವಿಮುಖರಾಗಿ ಇವತ್ತು ಹಪ್ಪಳ ಮಾಡುವುದನ್ನೇ ಕಾಯಕ ಮಾಡಿಕೊಂಡು ‘ಸ್ವಾವಲಂಬಿ’ ಬದುಕು ಕಟ್ಟಿಕೊಂಡಿದ್ದಾರೆ. ಎರಡು ಸಾವಿರ ಜನಸಂಖ್ಯೆಯ ಕಲ್ಲೂಡಿಯಲ್ಲಿ ಸದ್ಯ 500ಕ್ಕೂ ಅಧಿಕ ಕುಟುಂಬಗಳಿಗೆ ಹಪ್ಪಳ, ಸಂಡಿಗೆಯೇ ಜೀವನಾಧಾರದ ಮೂಲ.

ಇದರಿಂದ ತಿಂಗಳಿಗೆ ಸುಮಾರು ₹1 ಕೋಟಿ ವಹಿವಾಟು ನಡೆಯುತ್ತಿದೆ. ಕೆಲ ವರ್ಷಗಳ ಹಿಂದಷ್ಟೇ ಇಲ್ಲಿ ತೆರೆದ ಪ್ರಗತಿ ಗ್ರಾಮೀಣ ಬ್ಯಾಂಕ್‌ ಶಾಖೆಯಲ್ಲಿ ಶೇ 80 ರಷ್ಟು ಮಹಿಳಾ ಗ್ರಾಹಕರಿದ್ದಾರೆ. ವಿಶೇಷವೆಂದರೆ ಈ ಶಾಖೆ ಕೋಟಿಗಟ್ಟಲೇ ವಹಿವಾಟಿನಿಂದ ತಾಲ್ಲೂಕಿನಲ್ಲೇ ಮೊದಲ ಸ್ಥಾನದಲ್ಲಿದೆ. ಈ ಅಗಾಧ ಬದಲಾವಣೆಯ ಹಿಂದಿನ ರೂವಾರಿ ಗ್ರಾಮದ ಗಂಗಲಕ್ಷ್ಮಮ್ಮ. ಛೇರ್ಮನ್‌ ಜಯರಾಮೇಗೌಡರ ಸೊಸೆಯಾದ ಗಂಗಲಕ್ಷ್ಮಮ್ಮ ಊರಿನ ಮಹಿಳೆಯರಲ್ಲಿ ಸ್ವಾವಲಂಬನೆಯ ಕನಸು ಬಿತ್ತಿದವರು.

1987ರಲ್ಲಿ ಝಾನ್ಸಿರಾಣಿ ಮಹಿಳಾ ಮಂಡಳಿ, 1989ರಲ್ಲಿ ಜ್ಯೋತಿ ಯುವತಿ ಮಂಡಳಿ ಹುಟ್ಟು ಹಾಕಿ, ಆ ಮೂಲಕ ವಿವಿಧ ಚಟುವಟಿಕೆಗಳಲ್ಲಿ ಮಹಿಳೆಯರು, ಯುವತಿಯನ್ನು ತೊಡಗಿಸಿಕೊಂಡು ಅವರಿಗೆ ಸಂಘಟನಾ ಶಕ್ತಿಯ ಅರಿವು ಮೂಡಿಸಿದರು.

ADVERTISEMENT

1989ರಲ್ಲಿ ಕಲ್ಲೂಡಿ ಮಂಡಲ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಗಂಗಲಕ್ಷ್ಮಮ್ಮ ಅವರು ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದ ಭಾಗವಾದ ‘ಡ್ವಾಕ್ರಾ’ (ಗ್ರಾಮೀಣ ಪ್ರದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ) ಯೋಜನೆಯಡಿ ಗೃಹೋಪಯೋಗಿ ಆಹಾರ ಪದಾರ್ಥಗಳ ತಯಾರಿಕೆ ತರಬೇತಿ ಕೊಡಿಸಲು ನಿರ್ಧರಿಸಿದರು.

ಬೆಂಗಳೂರಿನಿಂದ ತರಬೇತುದಾರರನ್ನು ಕರೆಯಿಸಿ ಊರಿನ ಮಹಿಳೆಯರಿಗೆ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಮಸಾಲೆ ಮತ್ತು ಚಟ್ನಿ ಪುಡಿ ತಯಾರಿಸುವ ತರಬೇತಿ ಕೊಡಿಸಿದರು. ಬ್ಯಾಂಕ್‌ಗಳಿಂದ ಗೃಹ ಕೈಗಾರಿಕೆಗೆ ಅಗತ್ಯ ಸಾಲ ಕೊಡಿಸಲು ಶ್ರಮಿಸಿದರು.

ಸದ್ಯ ಕಲ್ಲೂಡಿಯಲ್ಲಿ ಸಿದ್ಧವಾಗುತ್ತಿರುವ 18 ಬಗೆಯ ಉತ್ಪನ್ನಗಳು ರಾಜ್ಯ ವಿವಿಧೆಡೆ, ಹೊರ ರಾಜ್ಯಗಳು ಮಾತ್ರವಲ್ಲದೆ ಅಮೆರಿಕ ಸೇರಿದಂತೆ ಕೆಲ ದೇಶಗಳಿಗೂ ರಫ್ತಾಗುತ್ತಿವೆ. ಈ ಪುಟ್ಟ ಊರು ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ಇದರಿಂದಾಗಿ ವಿದೇಶಗಳಿಗೆ ಸ್ಥಳೀಯ ಉತ್ಪನ್ನಗಳನ್ನು ರಫ್ತು ಮಾಡುವ ₹9 ಕೋಟಿ ಅಂದಾಜು ವೆಚ್ಚದ ಕೈಗಾರಿಕೆ ಸ್ಥಾಪನೆಗೆ ಜಿಲ್ಲಾ ಕೈಗಾರಿಕಾ ಕೇಂದ್ರ ನೀಲನಕ್ಷೆ ಸಿದ್ಧಪಡಿಸಿದೆ.

ಅನೇಕ ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆಗೆ ಕಾರಣರಾದ ಗಂಗಲಕ್ಷ್ಮಮ್ಮ ಅವರು 2009ರಲ್ಲಿ ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಹುಟ್ಟು ಹಾಕಿ ಸದ್ಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಮಹಿಳಾ ಸಹಕಾರಿ ಬ್ಯಾಂಕ್‌ ಪ್ರಾರಂಭಿಸಿದ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.