ಹೊಸಪೇಟೆ: ‘ರಾಜೀನಾಮೆಗೆ ಕಾರಣ ಕೇಳಿ ಸ್ಪೀಕರ್ ನೋಟಿಸ್ ಕೊಟ್ಟಿದ್ದಾರೆ. ಅವರು ಕರೆದರೆ ಖುದ್ದಾಗಿ ನಾನೇ ಹೋಗಿ ಕಾರಣ ತಿಳಿಸುವೆ’ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಹೇಳಿದರು.
ಸೋಮವಾರ ನಗರದ ವೇಣುಗೋಪಾಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಂದಾಲ್ಗೆ ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡಬಾರದು. 35 ಪೈಸೆಗೆ ಒಂದು ಚದರ ಅಡಿ ಜಮೀನು ಜಗತ್ತಿನಲ್ಲಿ ಎಲ್ಲಾದರೂ ಸಿಗುತ್ತದೆಯೇ? ಅಷ್ಟು ಕಡಿಮೆ ಬೆಲೆಯಲ್ಲಿ ಜಿಂದಾಲ್ಗೆ ಜಮೀನು ಕೊಡುತ್ತಿರುವುದು ಎಷ್ಟು ಸರಿ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿಜಯನಗರ ಜಿಲ್ಲೆ ಮಾಡಬೇಕೆಂಬ ಬೇಡಿಕೆ ಈಡೇರಿಸುವವರೆಗೆ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ.ಇದೇ ವಿಷಯವನ್ನು ಸ್ಪೀಕರ್ಗೂ ತಿಳಿಸುವೆ. ಅವರು ಕೇಳಿದರೆ ಇನ್ನೊಮ್ಮೆ ರಾಜೀನಾಮೆ ಪತ್ರ ಕೊಡುವೆ’ ಎಂದರು.
‘ಸಿ.ಎಂ. ಅಮೆರಿಕದಿಂದ ಕರೆ ಮಾಡಿದಾಗ ಅವರಿಗೂ ಇದೇ ವಿಷಯವನ್ನು ಹೇಳಿದ್ದೇನೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ. ನಾನು ಮುಂಬೈಗೆ ಹೋಗುವುದಿಲ್ಲ. ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಯೂ ಇಲ್ಲ. ಈಗಾಗಲೇ ರಾಜೀನಾಮೆ ಸಲ್ಲಿಸಿರುವ 14 ಜನ ಶಾಸಕರಂತೆ ನನ್ನ ಮುಂದಿನ ನಡೆ ಏನೆಂಬುದು ಕಾದು ನೋಡಿ’ ಎಂದು ಮಾರ್ಮಿಕವಾಗಿ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.