ಹಾಸನ: ‘ನನಗೆ ರಾಜಕೀಯ ನಿವೃತ್ತಿ ಹೊಂದುವ ವಯಸ್ಸಾಗಿಲ್ಲ. ವೈರಾಗ್ಯವೂ ಬಂದಿಲ್ಲ. ಜನರ ಪ್ರೀತಿ ಇರುವವರೆಗೆ ರಾಜಕೀಯದಲ್ಲಿ ಮುಂದುವರಿಯುವೆ. ಛಿ… ಥು… ಎನಿಸಿಕೊಂಡು ರಾಜಕೀಯ ಮಾಡಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
‘ಶೀಘ್ರ ಪಕ್ಷ ಸಂಘಟನೆ ಕೆಲಸ ಆರಂಭಿಸುವೆ. ಸಂಕ್ರಾಂತಿ ನಂತರ ಶಾಸಕರು, ಮುಖಂಡರ ಸಭೆ ನಡೆಸುವೆ. ಈಗಲೂ ನನ್ನ ಸರಿ ತಪ್ಪುಗಳ ಬಗ್ಗೆ ಆತ್ಮಾಲೋಕನ ಮಾಡಿಕೊಳ್ಳುತ್ತಿದ್ದೇನೆ. ಪಕ್ಷಕ್ಕೆ ಧಕ್ಕೆ ತರುವಂತಹ ವಿವಾದಾತ್ಮಕ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡದಂತೆ ನಾಯಕರಿಗೆ ಮನವಿ ಮಾಡಿದ್ದೇನೆ’ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಬಿಜೆಪಿಯೊಳಗೆ ಅಸಮಾಧಾನ ಕುದಿಯುತ್ತಿದ್ದು, 10 ರಿಂದ 15 ಜನ ಶಾಸಕರು ಹೊರ ಬರಲು ಸಿದ್ಧರಾಗಿದ್ದಾರೆ. ಹೊಸದಾಗಿ ಸರ್ಕಾರ ರಚನೆ ಮಾಡಲು ನೀವು ಕೈ ಹಾಕುವುದಲ್ಲವೇ ಎಂದು ಕೆಲವರು ಕೇಳುತ್ತಿದ್ದಾರೆ. ಆದರೆ,ನಾನು ಮತ್ತೆ ಕೆಸರಿನಲ್ಲಿ ಬೀಳುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಯಡಿಯೂರಪ್ಪ ಅವರ ರೀತಿ ಜವಾಬ್ದಾರಿ ಸರ್ಕಾರವನ್ನು ತೆಗೆಯುವ ನೀಚ ಕೆಲಸ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕನಕಪುರ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ಮಾಡುವ ನಿರ್ಧಾರ ಮಾಡಿರುವುದಕ್ಕೆ ಯಾವುದೇ ವಿವಾದ ಸೃಷ್ಟಿ ಮಾಡಲು ಬಯಸುವುದಿಲ್ಲ ಎಂದ ಅವರು. ಬಿಜೆಪಿಯಲ್ಲಿ 36 ಮಂದಿಯನ್ನೂ ಡಿಸಿಎಂ ಮಾಡಿಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಜಾರಿ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಕಿಡಿಕಾರಿದ ಎಚ್ಡಿಕೆ, ‘ರಾಜ್ಯ-ದೇಶದಲ್ಲಿ ನಾನಾ ಸಮಸ್ಯೆಗಳಿರುವಾಗ ಪೌರತ್ವ ಕಾಯಿದೆ ಜಾರಿ ಅಗತ್ಯವಿರಲಿಲ್ಲ. ಕೇಂದ್ರ ಸರ್ಕಾರದ ನೀತಿಯಿಂದಾಗಿ ವಿದೇಶಿ ಬಂಡವಾಳಶಾಹಿಗಳು ದೇಶದಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಟ್ರಂಪ್ ಒಂದೇ ರೀತಿ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ದೇಶಕ್ಕೆ ಮತ್ತಷ್ಟು ಕೆಟ್ಟ ದಿನಗಳು ಬರಲಿವೆ’ ಎಂದು ಎಚ್ಚರಿಕೆ ನೀಡಿದರು.
‘ದೇಶಕ್ಕೆ ಮತ್ತಷ್ಟು ಕೆಟ್ಟ ದಿನಗಳು’
‘ರಾಜ್ಯದಲ್ಲಿ, ದೇಶದಲ್ಲಿ ನಾನಾ ಸಮಸ್ಯೆಗಳಿರುವಾಗ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಯ ಅಗತ್ಯವಿರಲಿಲ್ಲ. ಕೇಂದ್ರ ಸರ್ಕಾರದ ನೀತಿಯಿಂದಾಗಿ, ವಿದೇಶಿ ಬಂಡವಾಳಶಾಹಿಗಳು ದೇಶದಲ್ಲಿ ಹೂಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಟ್ರಂಪ್ ಒಂದೇ ರೀತಿ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ದೇಶಕ್ಕೆ ಮತ್ತಷ್ಟು ಕೆಟ್ಟ ದಿನಗಳು ಬರಲಿವೆ’ ಎಂದು ಎಚ್.ಡಿ.ಕುಮಾರಸ್ವಾಮಿ ಎಂದು ಆತಂಕ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.