ADVERTISEMENT

ಪೌರತ್ವ ಸಾಬೀತು ಪಡಿಸಲ್ಲ: ಎನ್‌.ಮಹೇಶ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 17:14 IST
Last Updated 7 ಜನವರಿ 2020, 17:14 IST
ಎನ್‌.ಮಹೇಶ್‌
ಎನ್‌.ಮಹೇಶ್‌   

ಚಾಮರಾಜನಗರ: ‘ನಾನು ಈಗಾಗಲೇ ಈ ದೇಶದ ಪ್ರಜೆ. 13 ಬಾರಿ ಮತದಾನದ ಹಕ್ಕನ್ನು ಚಲಾಯಿಸಿದ್ದೇನೆ. ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ಬಂದರೆ (ಎನ್‌ಆರ್‌ಸಿ) ಅದರಲ್ಲಿ ಭಾಗಿಯಾಗುವುದಿಲ್ಲ. ನನ್ನ ಪೌರತ್ವವನ್ನು ಸಾಬೀತು ಪಡಿಸುವುದೂ ಇಲ್ಲ’ ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಪೌರತ್ವವನ್ನು ಪ್ರಶ್ನಿಸಲು ನೀವು ಯಾರು‌ಎಂದು ನಾನು ಈಗಾಗಲೇ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದೇನೆ. ನೋಂದಣಿಯೂ ಮಾಡಿಸಿಕೊಳ್ಳುವುದಿಲ್ಲ ಎಂದೂ ಘೋಷಿಸಿದ್ದೇನೆ’ ಎಂದರು.

‘ಪೌರತ್ವ ತಿದ್ದುಪಡಿ ಕಾಯ್ದೆಯು ಅತ್ಯಂತ ಸೀಮಿತವಾದ ಕಾನೂನು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ವಲಸೆ ಬಂದಿರುವ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತದ ಪೌರತ್ವವನ್ನು ಇದು ನೀಡುತ್ತದೆ. ಅಲ್ಲಿಂದ ಬಂದ ಅಕ್ರಮ ವಲಸಿಗರು ನಮ್ಮ ದೇಶದಲ್ಲಿ 30 ಲಕ್ಷದಿಂದ 40 ಲಕ್ಷದಷ್ಟು ಜನರಿದ್ದಾರೆ. ಅವರನ್ನು ಪತ್ತೆ ಮಾಡಲು 134.60 ಕೋಟಿ ಜನರನ್ನು ಸಂಕಷ್ಟಕ್ಕೆ ದೂಡುವುದು ಯಾಕೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಇದು ಕೂಡ ನೋಟು ರದ್ದತಿಯಂತಹ ಇನ್ನೊಂದು ಯೋಜನೆ. ಕಪ್ಪು ಹಣವನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿ ಬಿಳಿ ಹಣವನ್ನೆಲ್ಲ ಬ್ಯಾಂಕ್‌ಗೆ ಹಾಕುವಂತೆ ಜನರಿಗೆ ಕಷ್ಟ ಕೊಟ್ಟ ರೀತಿಯಲ್ಲೇ ಇದನ್ನೂ ಕೇಂದ್ರ ಸರ್ಕಾರ ಮಾಡಲು ಹೊರಟಿದೆ. ಅಂತಹ ಕಷ್ಟವನ್ನು ಕೊಡಬೇಡಿ ಎಂದು ಮನವಿ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.