ADVERTISEMENT

ಆಯುರ್ವೇದ ಔಷಧಿಗೆ ಐಸಿಎಂಆರ್ ಅನುಮತಿಸಬೇಕು: ಡಾ.ಕೆ.ಸುಧಾಕರ್

ಔಷಧಿಗೆ ಅನುಮತಿ ನೀಡುವಲ್ಲಿ ಸರ್ಕಾರದ ಪಾತ್ರ ಇಲ್ಲ ಎಂದ ವೈದ್ಯಕೀಯ ಶಿಕ್ಷಣ ಸಚಿವ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 11:08 IST
Last Updated 27 ಜುಲೈ 2020, 11:08 IST
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ‘ಕೋವಿಡ್‌ ಗುಣಪಡಿಸುವಂತಹ ಆಯುರ್ವೇದ ಔಷಧಿ ಸಂಶೋಧನೆ ಮಾಡಿರುವುದಾಗಿ ಅನೇಕರು ಸರ್ಕಾರವನ್ನುಸಂಪರ್ಕಿಸಿದ್ದಾರೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಪತ್ರ ಬರೆಯಲಾಗಿದೆ. ಔಷಧಿಗೆ ಐಸಿಎಂಆರ್ ಅನುಮೋದನೆ ನೀಡಬೇಕೇ ವಿನಾ ಸರ್ಕಾರವಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ‘ವೈದ್ಯ ಡಾ.ಗಿರಿಧರ್ ಕಜೆ ಅವರು ಮಾತ್ರವಲ್ಲ ರವಿಶಂಕರ್ ಗುರೂಜಿ, ಸದ್ಗುರು ಸೇರಿದಂತೆ ಅನೇಕರು ಕೋವಿಡ್‌ಗೆ ಆಯುರ್ವೇದ ಔಷಧಿ ಕಂಡು ಹಿಡಿದಿರುವುದಾಗಿ ತಿಳಿಸಿದ್ದಾರೆ’ ಎಂದು ತಿಳಿಸಿದರು.

‘ಯಾವುದೇ ಒಂದು ಔಷಧಿಯನ್ನು ಸರ್ಕಾರ ಒಪ್ಪಬೇಕಾದರೆ ಆ ಔಷಧಿಗೆ ಐಸಿಎಂಆರ್ ಅನುಮೋದನೆ ನೀಡಬೇಕು. ಹೀಗಾಗಿ, ಆ ಎಲ್ಲ ಔಷಧಿಗಳನ್ನು ಐಸಿಎಂಆರ್‌ ಪರೀಕ್ಷಿಸಿ ಯಾವುದು ಪರಿಣಾಮಕಾರಿಯಾಗಿದೆ, ಬಳಸಬಹುದು ಎಂದು ಅನುಮೋದನೆ ನೀಡುತ್ತದೆಯೋ ಅದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದರು.

ADVERTISEMENT

‘ಔಷಧಿಯೊಂದನ್ನು 10 ಜನರ ಮೇಲೆ ಪ್ರಯೋಗ ಮಾಡಿದ ಮಾತ್ರಕ್ಕೆ ಯೋಗ್ಯ ಎಂದು ಹೇಳಲಾಗದು. ಔಷಧಿ ವೈದ್ಯಕೀಯ ಪ್ರಯೋಗ ಯಶಸ್ವಿಯಾದ ಮೇಲೆ ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲದಿರುವ ಪಕ್ಷವೇನಾದರೂ ಇದ್ದರೆ ಅದು ಕಾಂಗ್ರೆಸ್. ಬಿಜೆಪಿ ಆಡಳಿತದಲ್ಲಿ ಇದೀಗ ದೇಶದಲ್ಲಿ ಪ್ರಜಾಪ್ರಭುತ್ವ ಮರಳುತ್ತಿದೆ. ಶಾಸಕನಿಗೆ ಆಡಳಿತ ಪಕ್ಷದ ನಾಯಕನ ಮೇಲೆ ನಂಬಿಕೆ ಹೋದರೆ ಅವನಿಗೆ ಪರ್ಯಾಯ ಆಲೋಚನೆ ಇರಬೇಕು. ಆದರೆ ಕಾಂಗ್ರೆಸ್‌ನವರು ಅದನ್ನು ಕಸಿಯುವ ಕೆಲಸ ಮಾಡಿದರು. ವ್ಯಕ್ತಿ ಸ್ವಾತಂತ್ರ್ಯವನ್ನೇ ಕಾಯ್ದೆಯ ಮೂಲಕ ಹರಣ ಮಾಡಿದ್ದರು. ಅದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.