ADVERTISEMENT

ಮುಸ್ಲಿಮರ ಪೌರತ್ವ ರದ್ದಾದರೆ ನಾನು ಹೋರಾಡುವೆ: ರಾಮದೇವ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 14:10 IST
Last Updated 4 ಫೆಬ್ರುವರಿ 2020, 14:10 IST
   

ಹೊಸಪೇಟೆ: ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವ ನಾಗರಿಕನ ಪೌರತ್ವ ರದ್ದಾಗುವುದಿಲ್ಲ. ಒಬ್ಬನೇ ಒಬ್ಬ ಮುಸ್ಲಿಂ ವ್ಯಕ್ತಿಯ ಪೌರತ್ವ ರದ್ದಾದರೂ ಅದರ ವಿರುದ್ಧ ನಾನೇ ಹೋರಾಟ ನಡೆಸುವೆ’ ಎಂದು ಹರಿದ್ವಾರ ಪತಂಜಲಿ ಯೋಗ ಪೀಠದ ಬಾಬಾ ರಾಮದೇವ ಧೈರ್ಯ ತುಂಬಿದರು.

‘ಕಾಯ್ದೆ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ಮುಸ್ಲಿಮರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಾವ ಪಕ್ಷ ಕೂಡ ಮತ ಬ್ಯಾಂಕಿಗಾಗಿ ರಾಜಕೀಯ ಮಾಡುವುದು ಸರಿಯಲ್ಲ. ಹಿಂದೂ ಹಾಗೂ ಮುಸ್ಲಿಮರಲ್ಲಿ ಕೆಲವು ಮೂಲಭೂತವಾದಿಗಳು ಭಯ, ಆತಂಕ ಮೂಡಿಸುವ ಕೆಲಸ ಮಾಡುತ್ತಿದ್ದು, ಅದನ್ನು ನಾನು ಖಂಡಿಸುತ್ತೇನೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಭಾರತ ಧರ್ಮಾಧಾರಿತ ರಾಷ್ಟ್ರವಲ್ಲ. ಇದು ಆಧ್ಯಾತ್ಮದ ನೆಲೆಬೀಡು. ಈ ದೇಶ ಸಂವಿಧಾನದ ಮೇಲೆ ನಡೆಯುತ್ತಿದೆ. ಭಗವಾನ್‌ ಮಹಾವೀರ, ಮಹಾತ್ಮ ಗಾಂಧೀಜಿ, ಬಸವೇಶ್ವರರು ಶಾಂತಿ, ಸಹಬಾಳ್ವೆಯ ತತ್ವಗಳನ್ನು ಕೊಟ್ಟು ಹೋಗಿದ್ದಾರೆ. ಇಂತಹ ನಾಡಿನಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ’ ಎಂದರು.

ವೈರಸ್‌ಗೆ ಮದ್ದು: ‘ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ ಸೋಂಕು ತಗುಲಿದವರನ್ನು ಗುಣಪಡಿಸಲು ಆಯುರ್ವೇದ ಔಷಧ ತಯಾರಿಸುವ ಕೆಲಸ ಆರಂಭಿಸಲಾಗಿದೆ. ಈ ಹಿಂದೆ ಡೆಂಗಿ, ಚಿಕುನ್‌ಗುನ್ಯಾಕ್ಕೂ ಪತಂಜಲಿಯಿಂದ ಔಷಧ ತಯಾರಿಸಿ, ಅನೇಕ ಜನರನ್ನು ಬದುಕುಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.