ADVERTISEMENT

ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ ಕಾಂಗ್ರೆಸ್‌ ಬಿಟ್ಟು ಬನ್ನಿ

ಮಾಜಿ ಸಚಿವ ಮಹದೇವಪ್ಪ ವಿರುದ್ದ ಸಂಸದ ಜಿಗಜಿಣಗಿ ಕಿಡಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 18:18 IST
Last Updated 22 ಅಕ್ಟೋಬರ್ 2021, 18:18 IST
ಸಂಸದ ರಮೇಶ ಜಿಗಜಿಣಗಿ
ಸಂಸದ ರಮೇಶ ಜಿಗಜಿಣಗಿ   

ಸಿಂದಗಿ: ‘ಬಿಜೆಪಿಯವರಿಗೆ ಸಂವಿಧಾನದ ಪರಿಕಲ್ಪನೆ ಗೊತ್ತಿಲ್ಲ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿರುವುದು ಖಂಡನೀಯ’ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ನಿಮಗೆ ನಿಜವಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಬಗ್ಗೆ ಗೌರವ, ಸ್ವಾಭಿಮಾನ ಇದ್ದರೆ ಒಂದು ನಿಮಿಷವೂ ಕಾಂಗ್ರೆಸ್ ಪಕ್ಷದಲ್ಲಿ ಇರಬಾರದು. ಡಾ.ಅಂಬೇಡ್ಕರ್ ಗೆ ಕಾಂಗ್ರೆಸ್ ಪಕ್ಷ ಕೊಟ್ಟ ಹಿಂಸೆ ಯಾವತ್ತೂ ಮರೆಯಲಾಗದು. ಅವರನ್ನು ಚುನಾವಣೆಯಲ್ಲಿ ಸೋಲಿಸಿರುವುದು ಕಾಂಗ್ರೆಸ್ ಪಕ್ಷ. ಅವರು ತೀರಿ ಹೋದ ಸಂದರ್ಭದಲ್ಲಿ ಅಂತ್ಯಕ್ರಿಯೆಗಾಗಿ ಸ್ಥಳ ನೀಡದ ಪಕ್ಷ ಕಾಂಗ್ರೆಸ್ ಎಂಬುದನ್ನು ಪ್ರತಿಯೊಬ್ಬ ಪರಿಶಿಷ್ಟ ಜಾತಿಯ ಜನರು ಮರೆಯಬಾರದು. ಪರಿಶಿಷ್ಟ ಜಾತಿಯ ಜನರು ಕಾಂಗ್ರೆಸ್ ಪಕ್ಷಕ್ಕೆ ಯಾವತ್ತೂ ಮತ ನೀಡಬೇಡಿ’ ಎಂದು ಕೇಳಿಕೊಂಡರು.

‘ಪ್ರಧಾನಿ ನರೇಂದ್ರ ಮೋದಿಯವರು ಡಾ.ಅಂಬೇಡ್ಕರ್ ಬದುಕಿನ ಸ್ಥಳಗಳನ್ನು ಸ್ಮಾರಕಗಳನ್ನಾಗಿ ಮಾಡುತ್ತಿದ್ದಾರೆ. ದೆಹಲಿಯಲ್ಲಿ ₹350 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಬದುಕಿನ ಭೂಮಿಯನ್ನು ಸ್ಮಾರಕವನ್ನಾಗಿ ನಿರ್ಮಿಸಿದ್ದಾರೆ. ಮಹಾದೇವಪ್ಪನವರು ವಾಸ್ತವ ಅರಿತು ಮಾತನಾಡಬೇಕು’
ಎಂದು ಸಂಸದರು ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.