ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್) ಖಾಲಿಯೇ ಇಲ್ಲದ ಹುದ್ದೆಗಳಿಗೆ ‘ಅಕ್ರಮ ನೇಮಕಾತಿ’ ನಡೆದಿರುವುದು ನಾಲ್ಕು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ವಿಮ್ಸ್ ನಿರ್ದೇಶಕರಾಗಿದ್ದ ಡಾ.ಲಕ್ಷ್ಮಿನಾರಾಯಣ ರೆಡ್ಡಿ ಅವರ ನಿಧನಕ್ಕೂ ಮುನ್ನ, ವಿಮ್ಸ್ಗಾಗಿ ಜುಲೈ– ಆಗಸ್ಟ್ನಲ್ಲಿ ಗುತ್ತಿಗೆ ಆಧಾರಿತ, ಮಿತ ವೇತನದ ಅಡಿ ನೇಮಕವಾಗಿದ್ದಾರೆ ಎನ್ನಲಾದ ನೌಕರರು ಸಂಬಳಕ್ಕಾಗಿ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದರು.
ಎರಡು ಕಂತಿನಲ್ಲಿ ನೇಮಕಾತಿ ನಡೆದಿದ್ದು, ಮೊದಲಿಗೆ, 150 ಹುದ್ದೆಗಳ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾಫ್ ನರ್ಸ್
ಗಳು, ಪ್ರಯೋಗಾಲಯ, ಎ.ಸಿ, ಡಯಾಲಿಸಿಸ್, ಫಿಸಿಯೋಥೆರಪಿ, ಎಕ್ಸ್ರೇ ತಂತ್ರಜ್ಞರು, ವಾಹನ ಚಾಲಕರು ಹಾಗೂ ಕಂಪ್ಯೂಟರ್ ಆಪರೇಟರ್ಗಳ ನೇಮಕಾತಿಯೂ ಆಗಿದೆ ಎನ್ನಲಾಗಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಮ್ಸ್ ಪ್ರಭಾರಿ ನಿರ್ದೇಶಕ ಡಾ.ಬಿ.ದೇವಾನಂದ್, ‘ಖಾಲಿಯೇ ಇಲ್ಲದ ಹಲವು ಹುದ್ದೆಗಳಿಗೂ ನೇಮಕಾತಿ ನಡೆದಿದೆ. ಇವುಗಳ ಕೆಲ ದಾಖಲೆಗಳೂ ನಮ್ಮ ಕಚೇರಿಯಲ್ಲಿ ಇಲ್ಲ’ ಎಂದರು.
‘ಈ ನೌಕರರಿಗೆ ಸಂಬಳ ನೀಡಬೇಕೆ? ಅವರ ಸೇವೆ ಮುಂದುವರಿಸಬೇಕೆ ಎಂಬ ಕುರಿತು ಆಡಳಿತ ಮಂಡಳಿಯ ಅಧ್ಯಕ್ಷ
ರಾಗಿರುವ ವೈದ್ಯಕೀಯ ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಡಿ.2ರಂದು ಬೆಂಗಳೂರಿನಲ್ಲಿ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.