ಮೈಸೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಗರದ ಕೆ.ಸುಬ್ರಹ್ಮಣ್ಯ ರೈ ಎಂಬುವರ ಮನೆ ಮೇಲೆ ದಾಳಿ ನಡೆಸಿ, ಅಂಗಳದ ಮರದಲ್ಲಿ ಬಚ್ಚಿಟ್ಟಿದ್ದ ಮಾವಿನ ಹಣ್ಣಿನ ಬಾಕ್ಸ್ನಲ್ಲಿದ್ದ ₹ 1 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಸಂಜೆ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಸುಬ್ರಹ್ಮಣ್ಯ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸೋದರ ಎನ್ನಲಾಗಿದೆ.
ಮನೆಯ ಅಂಗಳದಲ್ಲಿದ್ದ ಮರದಲ್ಲಿಟ್ಟಿದ್ದ ಬಾಕ್ಸ್ ಅನ್ನು ಪರಿಶೀಲಿಸಿದ ಅಧಿಕಾರಿ, ‘ಇದೇನು? ಕ್ಯಾಶ್ ಅಲ್ಲವೇ? ಯಾರು ಇರಿಸಿದ್ದಾರೆ? ಮೊದಲು ಹೇಳಿ. ಪ್ರಶ್ನೆಗೆ ಉತ್ತರಿಸಿ?’ ಎಂದು ಕುಟುಂಬದ ಮಹಿಳೆಯೊಬ್ಬರನ್ನು ಕೇಳುತ್ತಿರುವ ವಿಡಿಯೊ ಹಾಗೂ ಮನೆಯಲ್ಲಿ ಬಾಕ್ಸ್ ಅನ್ನು ತೆಗೆದ ಅಧಿಕಾರಿಗಳು ಹಣ ಎಣಿಸುತ್ತಿರುವ ಮತ್ತೊಂದು ವಿಡಿಯೊ ಕೂಡ ಹರಿದಾಡಿದೆ.
‘ದಾಳಿ ನಡೆದಿದ್ದು, ಹಣ ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಜಪ್ತಿ ಮಾಡಿರುವುದು ಇದೇ ಮೊದಲು’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.