ADVERTISEMENT

ವರ್ಕ್ ಫ್ರಮ್ ಹೋಮ್ ಸಾಕು: Infosys ನಾರಾಯಣಮೂರ್ತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 19:25 IST
Last Updated 11 ಮಾರ್ಚ್ 2022, 19:25 IST
ನಾರಾಯಣಮೂರ್ತಿ
ನಾರಾಯಣಮೂರ್ತಿ   

ಬೆಂಗಳೂರು: ‘ಕೋವಿಡ್‌ ಸಾಂಕ್ರಾಮಿಕ ಕಾಯಿಲೆ ಈಗ ಬಹುತೇಕ ಕಡಿಮೆಯಾಗಿದೆ. ಹೀಗಾಗಿ, ಮನೆಯಿಂದ ಕೆಲಸ ಮಾಡುವ ಅವಕಾಶವನ್ನು ಕಂಪನಿಗಳು ಇನ್ನು ಮುಂದೆ ಸ್ಥಗಿತಗೊಳಿಸಬೇಕು’ ಎಂದು ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಪ್ರತಿಪಾದಿಸಿದರು.

ಡೆಕ್ಕನ್‌ ಹೆರಾಲ್ಡ್‌ ಶುಕ್ರವಾರ ಆಯೋಜಿಸಿದ್ದ ‘ಡಿಎಚ್‌ ಬೆಂಗಳೂರು 2040 ಶೃಂಗ’ದಲ್ಲಿ ಮಾತನಾಡಿದ ಅವರು, ಮನೆಯಿಂದ ಕೆಲಸ ಮಾಡುವ ಸ್ವರೂಪವನ್ನು ಸಮಗ್ರವಾಗಿ ಬದಲಾಯಿಸಬೇಕು ಎಂದು ಪ್ರತಿಪಾದಿಸಿದರು.

‘ಮನೆಯಿಂದ ಕೆಲಸ ಮಾಡುವುದು ನನಗಂತೂ ಇಷ್ಟ ಇಲ್ಲ. ಮನೆಯಿಂದ ಉದ್ಯೋಗಿಗಳು ಕೆಲಸ ಮಾಡಿದರೆ ಕೆಲಸದಲ್ಲಿ ಉತ್ಕೃಷ್ಟತೆ, ಸೃಜನಶೀಲತೆಯೂ ಸಾಧ್ಯವಾಗುವುದಿಲ್ಲ. ಕೆಲಸದ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸೈಬರ್‌ ಅಪರಾಧಗಳು ಹೆಚ್ಚಳ: ಡಿಜಿಪಿ

ಬೆಂಗಳೂರು: ‘ತಂತ್ರಜ್ಞಾನ ಅಭಿವೃದ್ಧಿಯಾದಂತೆ ಸೈಬರ್‌ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ 100 ಪಟ್ಟು ಹೆಚ್ಚಾಗಬಹುದು’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್‌ ಸೂದ್‌ ಎಚ್ಚರಿಕೆ ನೀಡಿದರು.

‘ಡಿಎಚ್‌ ಬೆಂಗಳೂರು 2040 ಶೃಂಗ’ದಲ್ಲಿ ಮಾತನಾಡಿದ ಅವರು, ‘ವರ್ಚುವಲ್‌ ಸ್ವರೂಪದ ಅಪರಾಧಗಳು ಹೆಚ್ಚುತ್ತಿವೆ. ಮುಖ ಮತ್ತು ಹೆಸರು ಇಲ್ಲದೆಯೇ ಜಗತ್ತಿನ ಯಾವುದೋ ಸ್ಥಳದಲ್ಲಿ ಕುಳಿತು ಅಪರಾಧ ಮಾಡುವವರನ್ನು ಪತ್ತೆ ಮಾಡುವುದು ಸಹ ಕಷ್ಟಸಾಧ್ಯವಾಗಿದೆ’ ಎಂದರು.

‘ಬೀದಿ ವ್ಯಾಪಾರಿಗಳ ಮೇಲೇಕೆ ಕಣ್ಣು?’: ‘ಸಂಚಾರಕ್ಕೆ ತೊಡಕಾಗಿದ್ದಾರೆ ಎಂದು ಬೀದಿ ವ್ಯಾಪಾರಿಗಳ ಮೇಲೆ ದೂರುವುದು ಸಹಜವಾಗಿದೆ. ಆದರೆ, ಬೆಂಗಳೂರು ನಗರದಲ್ಲಿ ರಸ್ತೆಯಲ್ಲೇ ಸಾವಿರಾರು ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗಿದೆ. ಇವುಗಳ ಬಗ್ಗೆ ಯಾರು ದೂರುವುದಿಲ್ಲ. ಬೀದಿ ವ್ಯಾಪಾರಿಗಳನ್ನು ಮಾತ್ರ ಸುಲಭವಾಗಿ ಗುರಿ ಮಾಡುತ್ತಾರೆ’ ಎಂದು ಅವರುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.