ADVERTISEMENT

ಕ್ರಿಮಿನಾಶಕ ಮಿಶ್ರಿತ ನೀರು ಸೇವನೆ; 15 ಕಾರ್ಮಿಕರು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 13:01 IST
Last Updated 28 ನವೆಂಬರ್ 2022, 13:01 IST

ಮದ್ದೂರು (ಮಂಡ್ಯ ಜಿಲ್ಲೆ): ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ 15 ಮಂದಿ ಬಳ್ಳಾರಿ ಮೂಲದ ಕಬ್ಬು ಕಟಾವು ಕಾರ್ಮಿಕರು ಅಸ್ವಸ್ಥರಾದ ಘಟನೆ ಮದ್ದೂರು ತಾಲ್ಲೂಕು ಹೊಸಕೊಪ್ಪಲು ಗ್ರಾಮದ ಬಳಿ ಸೋಮವಾರ ನಡೆದಿದೆ.

ಕೊಪ್ಪ ಹೋಬಳಿ ವ್ಯಾಪ್ತಿಯ ಬಳ್ಳೇಕೆರೆ ಕ್ಯಾಂಪ್‌ನಲ್ಲಿ 30 ಮಂದಿ ಕಾರ್ಮಿಕರು ವಾಸ್ತವ್ಯ ಹೂಡಿದ್ದರು. ಕಬ್ಬು ಕಟಾವು ಮಾಡಲು ಹೊಸಕೊಪ್ಪಲು ಬಳಿಯ ಗದ್ದೆಗೆ ತೆರಳಿದ್ದರು. ರೈತರೊಬ್ಬರು ನೀರಿನಲ್ಲಿ ಕ್ರಿಮಿನಾಶಕ ಮಿಶ್ರಣ ಮಾಡಿ ಬೆಳೆಗೆ ಸಿಂಪಡಣೆ ಮಾಡಲು ಡ್ರಮ್‌ ನಲ್ಲಿ ತುಂಬಿಸಿ ಇಟ್ಟಿದ್ದರು. ಅದನ್ನು ಕುಡಿಯುವ ನೀರು ಎಂದು ತಿಳಿದ ಕಾರ್ಮಿಕರು ಸೇವನೆ ಮಾಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಬಂದ ರೈತರು ನೀರು ಕುಡಿಯದಂತೆ ಎಚ್ಚರಿಸಿದ್ದಾರೆ, ಆದರೆ, ಆ ವೇಳೆಗಾಗಲೇ 15 ಮಂದಿ ನೀರು ಕುಡಿದಿದ್ದರು. ನಂತರ ವಾಂತಿ ಮಾಡಿಕೊಂಡ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಆಂಬುಲೆನ್ಸ್‌ ಕರೆಸಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.