ಮಂಗಳೂರು: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ಪೊಲೀಸರು ಬಂಧಿಸಿರುವ ಮಾಝ್ ಮುನೀರ್ ಅಹಮದ್ (23) ಮಂಗಳೂರಿನ ನಿವಾಸಿ. ಆತ ಸೆ.14ರಿಂದ ಕಾಣೆಯಾಗಿದ್ದಾನೆ ಎಂದು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್ಐಆರ್ ದಾಖಲಾಗಿತ್ತು.
'ಬಿ.ಇ. ವಿದ್ಯಾರ್ಥಿಯಾಗಿರುವ ಮಾಝ್ ಆರ್ಯ ಸಮಾಜ ರಸ್ತೆಯಲ್ಲಿರುವ ಮನೆಯಿಂದ ಸೆ 14ರ ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಯಾವುದೋ ಕರೆ ಬಂದ ಕಾರಣಕ್ಕೆ ಹೊರಗೆ ಹೋಗಿದ್ದ. ಈವರೆಗೆ ಮನೆಗೆ ಬಂದಿಲ್ಲ. ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾನೆ. ಆತನನ್ನು ಪತ್ತೆ ಮಾಡಿ ಕೊಡಬೇಕು' ಎಂದು ಆತನ ತಂದೆ ಮುನೀರ್ ಅಹಮದ್ ಅವರು ಕದ್ರಿ ಠಾಣೆಗೆ ಸೋಮವಾರ ದೂರು ನೀಡಿದ್ದರು.
ಆರೋಪಿಯು ಆರ್ಯ ಸಮಾಜ ರಸ್ತೆ ಬಳಿಯ ಅಪಾರ್ಟ್ಮೆಂಟ್ ಸಮುಚ್ಚಯವೊಂದರಲ್ಲಿ ವಾಸವಿದ್ದ. ನಗದಲ್ಲಿ ಬಂದರಿನಲ್ಲಿ ಹಾಗೂ ಕೋರ್ಟ್ ರಸ್ತೆಯ ಬಳಿ ‘ಲಷ್ಕರ್ ಎ ತಯ್ಯಬಾ ಹಾಗೂ ತಾಲಿಬಾನ್ ಪರ ಗೋಡೆಬರಹ ಬರೆದ ಪ್ರಕರಣದಲ್ಲಿ 2020ರ ನವೆಂಬರ್ 27ರಂದು ಬಂಧಿತನಾಗಿದ್ದ. ಆತನಿಗೆ 2021ರ ಸೆ. 8ರಂದು ಜಾಮೀನು ಸಿಕ್ಕಿತ್ತು.
ಐಸಿಸ್ ಜೊತೆ ನಂಟು ಹೊಂದಿರುವ ಇನ್ನೊಬ್ಬ ಆರೋಪಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾರಿಕ್ ಕೂಡಾ ನಗರದಲ್ಲಿ ಆಕ್ಷೇಪಾರ್ಹ ಗೋಡೆ ಬರಹ ಬರೆದ ಪ್ರಕರಣದಲ್ಲಿ ಬಂಧಿತನಾಗಿದ್ದ. ತೀರ್ಥಹಳ್ಳಿಯಲ್ಲಿ ಸಗಟು ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಶಾರಿಕ್ ನಗರದಲ್ಲಿ ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆಯಲ್ಲೂ ಕೆಲಸ ಮಾಡಿದ್ದ. ಮಾಜ್ ಹಾಗೂ ಶಾರಿಕ್ ಗೆಳೆಯರಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಝ್ ಕುಟುಂಬ ವಾಸವಿರುವ ಆರ್ಯ ಸಮಾಜ ರಸ್ತೆಯ ಅಪಾರ್ಟ್ಮೆಂಟ್ ಸಮುಚ್ಚಯದ ಬಳಿ ಮಂಗಳವಾರ ಪೊಲೀಸ್ ಕಾವಲು ಹಾಕಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.