ಕೊಡ್ಲಿಪೇಟೆ (ಕೊಡಗು ಜಿಲ್ಲೆ): ‘ವಿಧಾನ ಪರಿಷತ್ ಸದಸ್ಯರಾಗುವುದಕ್ಕೂ ಮೊದಲು ಒಂದು ರೀತಿಯ ಮಾತು. ಗೆದ್ದಾದ ಮೇಲೆ ಬೇರೆ ರೀತಿಯ ನಡವಳಿಕೆ. ಇದು ಸರಿಯಲ್ಲ. ಪಕ್ಷಕ್ಕೆ ಯಾರೂ ಅನಿವಾರ್ಯ ಅಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿಕೆಗೆ ಶುಕ್ರವಾರ ಇಲ್ಲಿ ತಿರುಗೇಟು ನೀಡಿದರು.
ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯಲ್ಲಿ ಮಾತನಾಡಿ, ‘ಅಸಮಾಧಾನವಿದ್ದರೆ ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಹೇಳಿಕೆ ನೀಡುವುದು ತಪ್ಪು. ಸಮಸ್ಯೆಗಳಿದ್ದರೆ ಬನ್ನಿ ಚರ್ಚಿಸೋಣ’ ಎಂದು ಕುಮಾರಸ್ವಾಮಿ ಹೇಳಿದರು.
‘ಉಪ ಚುನಾವಣಾ ಫಲಿತಾಂಶದ ಬಳಿಕ ಜೆಡಿಎಸ್ ನಿಲುವು ಸ್ಪಷ್ಟವಾಗಲಿದೆ. ಯಾವುದೇ ಸರ್ಕಾರ ಐದು ವರ್ಷ ಪೂರ್ಣಗೊಳಿಸಬೇಕು. ಯಾರಿಗೂ ತೊಂದರೆ ಆಗಬಾರದೆಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ. ನಾವಾಗಿಯೇ ಬಿಜೆಪಿ ಬೆಂಬಲಿಸುತ್ತೇವೆಂದು ಎಲ್ಲೂ ಹೇಳಿಲ್ಲ. ಉಪ ಚುನಾವಣೆ ಫಲಿತಾಂಶ ಬಂದ ಮೇಲೆ ಸನ್ನಿವೇಶ ಹೇಗಿರುತ್ತೆ ಕಾದು ನೋಡೋಣ’ ಎಂದು ಹೇಳಿದರು.
‘ಪಠ್ಯ ಪುಸ್ತಕದಿಂದ ಟಿಪ್ಪು ವಿಷಯ ತೆಗೆದ ತಕ್ಷಣ ಇತಿಹಾಸ ಬದಲಾಗುತ್ತಾ? ಬಿಜೆಪಿ ಸರ್ಕಾರದ್ದು ಒಂದು ಬಾಲಿಶ ನಡೆ’ ಎಂದು ದೂರಿದರು.
‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆಗೆಅನುಮೋದನೆಗೊಂಡಿದ್ದ ಕಾಮಗಾರಿ ಪೂರ್ಣಗೊಳಿಸಲುಬಿಜೆಪಿ ಸರ್ಕಾರ ಬಿಡುತ್ತಿಲ್ಲ. ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಆಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.