ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ನ.1ರಿಂದ ಆರಂಭಗೊಳ್ಳಲಿರುವ ‘ಪಂಚರತ್ನ’ ರಥಯಾತ್ರೆಗೆ ಸಜ್ಜಾಗುವ ಪ್ರಮುಖ ಕಾರ್ಯಸೂಚಿಯೊಂದಿಗೆ ಜೆಡಿಎಸ್ ಹಮ್ಮಿಕೊಂಡಿರುವ ಎರಡು ದಿನಗಳ ಸಮಾಲೋಚನಾ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಹೊರವಲಯದ ರೆಸಾರ್ಟ್ನಲ್ಲಿ 126 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು, ಶಾಸಕರು, ಮಾಜಿ ಶಾಸಕರು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಕೂಡ ಅ.20ರಂದು ಪಾಲ್ಗೊಳ್ಳಲಿದ್ದಾರೆ. ‘ಪಂಚರತ್ನ’ ರಥಯಾತ್ರೆ ಅಂತಿಮ ಹಂತದ ಸಿದ್ಧತೆಗಳ ಬಗ್ಗೆ ಚರ್ಚಿಸಿ, ಕಾರ್ಯಕರ್ತರು ಚುನಾವಣೆಗೆ ಸಜ್ಜಾಗುವಂತೆ ಸೂಚಿಸಲಾಯಿತು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ‘123 ಸ್ಥಾನಗಳನ್ನು ಗೆಲ್ಲಲೇ
ಬೇಕೆಂಬ ಸವಾಲನ್ನು ಸ್ವೀಕರಿಸಬೇಕು. ಕಾಂಗ್ರೆಸ್ ಹಾಗೂ ಬಿಜೆಪಿಯ ನಡವಳಿಕೆಯಿಂದ ಬೇಸತ್ತಿರುವ ಜನರು ಪರ್ಯಾಯ ಬಯಸಿದ್ದಾರೆ. ಜೆಡಿಎಸ್ನತ್ತ ಒಲವು ತೋರಿಸುತ್ತಿದ್ದಾರೆ. ಹೀಗಾಗಿ, ಗುರಿ ಮುಟ್ಟಲು ಬಹಳಷ್ಟು ಅವಕಾಶವಿದೆ’ ಎಂದು ತಿಳಿಸಿದರು.
‘ನಾವು ನೀಡಿರುವ ಟಾಸ್ಕ್ ಅನ್ನು ಕೆಲವರು ಸಮರ್ಥವಾಗಿ ಅನುಷ್ಠಾನಗೊಳಿಸುತ್ತಿದ್ದೀರಿ. ಕೆಲವು ಕ್ಷೇತ್ರದಲ್ಲಿನ ಕಾರ್ಯ ಸಮಾಧಾನ ತಂದಿಲ್ಲ. ಚುನಾವಣೆ ಘೋಷಣೆಯಾಗಲಿ ನಂತರ ನೋಡೋಣ ಎಂದು ಸುಮ್ಮನಿದ್ದೀರಿ. ಇದು ಸರಿಯಲ್ಲ. ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ತಿಳಿಸಿ ಜನರ ಮನಗೆಲ್ಲಬೇಕು’ ಎಂದರು.
‘ನ.1ರಿಂದ ಆರಂಭಗೊಳ್ಳುವ ಪಂಚರತ್ನ ರಥಯಾತ್ರೆಯು 22 ಜಿಲ್ಲೆಗಳ 106 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ನ.1ರಂದು 126 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು’ ಎಂದರು.
ಕೈಮುಗಿದ ಎಚ್ಡಿಕೆ: ‘ಬೇರೆಯವರ ಜೊತೆ ಕೈಜೋಡಿಸುವ ಕಷ್ಟವನ್ನು ತಂದೊಡ್ಡಬೇಡಿ’ ಎಂದು ಕೈಮುಗಿದು ಬೇಡಿಕೊಂಡ ಅವರು, ‘30-40 ಸೀಟು ಗೆದ್ದರೆ ಯಾರಾದರೂ ನೇತೃತ್ವ ವಹಿಸಿ ನೋಡಿಕೊಳ್ಳಲಿ, ನಾನು ದೂರದಲ್ಲಿದ್ದು ಸಲಹೆ ಕೊಡುತ್ತೇನಷ್ಟೆ. ಸುಮ್ಮನೆ ಸ್ಪರ್ಧಿ
ಸಬೇಡಿ. ಗೆಲ್ಲಲೇಬೇಕೆಂದು ಸ್ಪರ್ಧಿಸಿ’ ಎಂದು ತಿಳಿಸಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಮುಖಂಡ ಕುಪೇಂದ್ರ ರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.