ADVERTISEMENT

‘ಸಿದ್ದರಾಮಯ್ಯರ ಗಿಣಿಗಳೇ ಹದ್ದಾಗಿ ಕುಕ್ಕಿದವು’ ಕುಮಾರಸ್ವಾಮಿ ನೇರ ಆರೋಪ

ತುಮಕೂರು, ಮಂಡ್ಯ, ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿಗೆ ಸೋಲು:

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:54 IST
Last Updated 23 ಸೆಪ್ಟೆಂಬರ್ 2019, 19:54 IST
ಎಚ್‌. ಡಿ. ಕುಮಾರಸ್ವಾಮಿ
ಎಚ್‌. ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಮತ್ತು ಮಂಡ್ಯಗಳಲ್ಲಿ ಜೆಡಿಎಸ್‌ ಸೋಲಿಗೆ ಹಾಗೂ ಕೋಲಾರದಲ್ಲಿ ಕಾಂಗ್ರೆಸ್‌ ಸೋಲಿಗೆ ಸಿದ್ದರಾಮಯ್ಯ ಸಾಕಿದ ಮುದ್ದಿನ ಗಿಣಿಗಳು ಕುಕ್ಕಿದ್ದೇಕಾರಣ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಕಾಂಗ್ರೆಸ್‌ನವರು ಅವರ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಲಿ. ಅವರು ಸರಿಯಾಗಿ ಕೆಲಸ ಮಾಡಿಲ್ಲ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆವು.ಮೈಸೂರಿನಲ್ಲಿಸೋಲಲು ಸಿದ್ದರಾಮಯ್ಯ ಸ್ವಯಂಕೃತ ಅಪರಾಧವೇ ಕಾರಣ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಆಗಿತ್ತು. ಈ ಕ್ಷಣದವರೆಗೂ ನಾನು ಅದರ ಚರ್ಚೆ ಮಾಡಿಲ್ಲ. ಲೋಕಸಭೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಸರಿಯಾಗಿ ಕೆಲಸ ಮಾಡಿಲ್ಲ.ನಾನು ಹೇಗೆ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದೆ ಅಂತ ಎಲ್ಲರಿಗೂ ಗೊತ್ತು’ ಎಂದರು.

ADVERTISEMENT

‘ಹೊಸಕೋಟೆಯಲ್ಲಿ ಸಿದ್ದರಾಮಯ್ಯಸ್ವಾಭಿಮಾನದ ಭಾಷಣ ಮಾಡಿದರು. ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಸಾಯುತ್ತಿದ್ದಾರೆ. ಈಗ ಸಿದ್ದರಾಮಯ್ಯ ಅವರ ಸ್ವಾಭಿಮಾನ ಎಲ್ಲಿಗೆ ಹೋಯಿತು?ಇವರ ನಾಟಕ ಎಲ್ಲಾ ನನಗೆ ಗೊತ್ತಿದೆ.ಮಂಡ್ಯದಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಏನೇನುಮಾಡುತ್ತಿದ್ದಾರೆ ಎಂಬುದೂ ಗೊತ್ತಿದೆ’ ಎಂದರು.

‘ಮಂಡ್ಯಕ್ಕೆ ನಾನು ಕೊಟ್ಟ ಎಲ್ಲಾ ಕಾರ್ಯಕ್ರಮವನ್ನು ಈ ಸರ್ಕಾರ ರದ್ದು ಮಾಡಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಕಾಂಗ್ರೆಸ್ ನಾಯಕರೇ ಅವರ ಜತೆ ಕೈಜೋಡಿಸಿದರು. ಅವರಿಗೆ ನಾಚಿಕೆ ಆಗುವುದಿಲ್ಲವೇ?ಇಂತಹ ಕೀಳುಮಟ್ಟದ ರಾಜಕೀಯ ಅವರು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಯಾರ ಸಹವಾಸವೂ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

2 ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ: ‘ಇನ್ನು ಎರಡು ದಿನಗಳಲ್ಲಿ ಎಲ್ಲ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಿದ್ದೇವೆ. ದೇವೇಗೌಡರ ಕುಟುಂಬ ಈತನಕ ಅನುಭವಿಸಿರುವ ನೋವು ಸಾಕಾಗಿದೆ. ಯಾವುದೇ ಒತ್ತಡ ಇದ್ದರೂ ಸ್ಥಳೀಯರಿಗೇ ಟಿಕೆಟ್. ಸಾಮಾನ್ಯ ಕಾರ್ಯಕರ್ತರನ್ನೂ ಗೆಲ್ಲಿಸಿಕೊಂಡು ಬರುತ್ತೇವೆ.ನಮ್ಮ ಕುಟುಂಬ ಸದಸ್ಯರು ಯಾರೂ ಉಪ ಕದನ ಆಗಲಿ, ದೊಡ್ಡ ಕದನ ಆಗಲಿ ಸ್ಪರ್ಧೆ ಮಾಡುವುದಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ಎಲ್ಲ ಕ್ಷೇತ್ರವನ್ನೂ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಬಿಜೆಪಿ ಆಡಳಿತದಲ್ಲಿ ಜನ ಈಗಾಗಲೇ ಬೇಸತ್ತಿದ್ದಾರೆ. ನೆರೆ ವಿಷಯದಲ್ಲಿ ಬಿಜೆಪಿ ವರ್ತನೆ ಜನರಲ್ಲಿ ಆಕ್ರೋಶ ಮೂಡಿಸಿದೆ. ಕಾಂಗ್ರೆಸ್ ನಾಯಕರ ಕಿತ್ತಾಟ ಜನರಿಗೆ ಬೇಸರ ಮೂಡಿಸಿದೆ. ಜನರಿಗೆ ವಿಶ್ವಾಸ ಮೂಡಿಸುವ ಕೆಲಸವನ್ನು ನಾವು ಮಾಡುತ್ತೇವೆ.ಸ್ವತಂತ್ರ ಸ್ಪರ್ಧೆಯಿಂದ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನ ಪಡೆಯುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು‌ ಸಿಎಂ ಆಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಕ್ರಮ ಜಾರಿಗೆ ತಂದಿದ್ದೆ. ಸಾಲಮನ್ನಾ, ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ಆದರೆಬಿಜೆಪಿ ಋಣಮುಕ್ತ ಕಾಯ್ದೆಯನ್ನು ಸರಿಯಾಗಿ ಜಾರಿಗೆ ತರುತ್ತಿಲ್ಲ.ಬಡ್ಡಿ ತೆಗೆ
ದುಕೊಳ್ಳುವವರಿಗೆಬಿಜೆಪಿ ಅನುಕೂಲ ಮಾಡಿಕೊಡುತ್ತಿದೆ.ಬಡವರ ಬಂಧು ಸರಿಯಾಗಿ ಜಾರಿ ತಂದಿಲ್ಲ. ನೆರೆ ಪರಿಹಾರವನ್ನು ಸರಿಯಾಗಿ ಮಾಡಿಲ್ಲ. ಬಿಜೆಪಿಯ ವೈಫಲ್ಯಗಳೇ ನಮ್ಮಮುಖ್ಯ ಚುನಾವಣಾ ವಿಷಯ’
ಎಂದರು.

ಕೋಲಾರದಲ್ಲಿ ಕೈಕೊಟ್ಟದ್ದು ಯಾರು?

‘ಹದ್ದಾಗಿ ಕುಕ್ಕಿತಲ್ಲೋ ಅಂತ ಯಾರೋ ಭಾಷಣ ಮಾಡಿದ್ದಾರೆ. ಮುನಿಯಪ್ಪರನ್ನು ಕುಕ್ಕಿದ್ದು ಯಾರು ಅಂತ ಅವರೇ ಹೇಳಲಿ’ ಎಂದು ಮಾಜಿ ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರ ಹೆಸರು ಹೇಳದೆ ಕುಮಾರಸ್ವಾಮಿವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.