ADVERTISEMENT

ವಿಚಾರವಾದಿ ಜ.ಹೊ.ನಾರಾಯಣಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 12:27 IST
Last Updated 9 ನವೆಂಬರ್ 2018, 12:27 IST
ಜ.ಹೊ.ನಾರಾಯಣಸ್ವಾಮಿ
ಜ.ಹೊ.ನಾರಾಯಣಸ್ವಾಮಿ   

ಮೈಸೂರು, ಹಾಸನ: ಲೇಖಕ, ವಿಚಾರವಾದಿ ಆದ ಜ.ಹೊ.ನಾರಾಯಣಸ್ವಾಮಿ (75) ಅನಾರೋಗ್ಯದಿಂದ ಶುಕ್ರವಾರ ನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ನಿಧನರಾದರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು, ತೀವ್ರ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯದೆ ಪ್ರಯಾಣ ಮಾಡಿದ್ದ ಅವರು ನಿತ್ರಾಣಗೊಂಡಿದ್ದರಿಂದ ಗುರುವಾರ ಹಾಸನದ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ಲೆಟ್ ಲೇಟ್ಸ್ ಸಂಖ್ಯೆ ತೀವ್ರ ಕುಸಿತವಾದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ಎಸ್‌ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಅವರಿಗೆ ಪತ್ನಿ, ಸೋದರ, ಪುತ್ರಿ ಹಾಗೂ ಲೇಖಕಿ ಜ.ನಾ.ತೇಜಶ್ರೀ ಇದ್ದಾರೆ. ಹಾಸನ ತಾಲ್ಲೂಕಿನ ಜನಿವಾರ ಗ್ರಾಮದ ಅವರು ಹಾಸನದಲ್ಲಿ ವಕೀಲರಾಗಿದ್ದರು. ಇದಕ್ಕೂ ಮೊದಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಅವರು, ನಂತರ ಕಾನೂನು ಪದವಿ ಪಡೆದು ಪಬ್ಲಿಕ್ ಪ್ರಾಸಿಕ್ಯೂಟರ್‌ ಆಗಿದ್ದರು. ಜತೆಗೆ, ಹಾಸನದ ರಾಜೀವ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಹಾಗೂ ಕನ್ನಡ ವಿಷಯವನ್ನು ಬೋಧಿಸುತ್ತಿದ್ದರು. 3 ವರ್ಷಗಳಿಂದ ಕೃಷಿ ಮಾಡುತ್ತಿದ್ದರು.

ADVERTISEMENT

ಜಗದ ತೊಟ್ಟಿತು (ಕವನ ಸಂಕಲನ), ಅದಮ್ಯ (ಕಾದಂಬರಿ), ರಣಬಲಿ (ನಾಟಕ), ವೇದಪುರಾಣ ಆಚೆಗೆ (ವೈಚಾರಿಕ ಲೇಖನಗಳ ಸಂಕಲನ), ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು (ಲೇಖನಗಳ ಸಂಕಲನ), ಸಿದ್ಧಾರ್ಥ (ಅನುವಾದಿತ ಕಾದಂಬರಿ) ಇತರ ಕೃತಿಗಳನ್ನು ರಚಿಸಿದ್ದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು.

ಅಂತ್ಯಕ್ರಿಯೆ ಜನಿವಾರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.