ADVERTISEMENT

ನವಭಾರತಕ್ಕಾಗಿ ಸರ್ಕಾರದ ಜತೆ ಕೈಜೋಡಿಸಿ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 13 ಮೇ 2022, 6:07 IST
Last Updated 13 ಮೇ 2022, 6:07 IST
ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಮ್ಮೇಳನದ ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ರವಿಶಂಕರ್, ಸಮಿತಿ ಅಧ್ಯಕ್ಷ ಬಿ.ಎ. ಮಧುಕರ್, ಸಮ್ಮೇಳನದ ಅಧ್ಯಕ್ಷ ಟಿ.ಎಸ್. ಗುರುರಾಜ್ ಹಾಗೂ ‘ಇನ್‌ಸ್ಟ್ರಕ್ಟ್‌’ ಸಂಸ್ಥೆ ಅಧ್ಯಕ್ಷ ಕೆ.ಎಲ್‌. ಮೋಹನ್ ರಾವ್ ಇದ್ದರು   – ಪ್ರಜಾವಾಣಿ ಚಿತ್ರ
ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಮ್ಮೇಳನದ ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ರವಿಶಂಕರ್, ಸಮಿತಿ ಅಧ್ಯಕ್ಷ ಬಿ.ಎ. ಮಧುಕರ್, ಸಮ್ಮೇಳನದ ಅಧ್ಯಕ್ಷ ಟಿ.ಎಸ್. ಗುರುರಾಜ್ ಹಾಗೂ ‘ಇನ್‌ಸ್ಟ್ರಕ್ಟ್‌’ ಸಂಸ್ಥೆ ಅಧ್ಯಕ್ಷ ಕೆ.ಎಲ್‌. ಮೋಹನ್ ರಾವ್ ಇದ್ದರು   – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಯಾವಾಗಲೂ ಮುಂಚೂಣಿಯಲ್ಲಿದೆ. ಭವಿಷ್ಯದಲ್ಲೂ ಈ ಸ್ಥಾನವನ್ನು ಉಳಿಸಿಕೊಳ್ಳಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಆರಂಭವಾದ ಸುರಂಗ ಮತ್ತು ಭೂಗತ ನಿರ್ಮಾಣ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ‘ನಿರ್ಮಾಣ–2022’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನವಭಾರತಕ್ಕಾಗಿ ನವ ಕರ್ನಾಟಕದ ನಿರ್ಮಾಣದ ಧ್ಯೇಯವನ್ನು ಸಾಕಾರಗೊಳಿಸಲು ನಿರ್ಮಾಣ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು’ ಎಂದು ಹೇಳಿದರು.

‘ನಮ್ಮ ಮುಂದೆ ಸವಾಲುಗಳು ಸಾಕಷ್ಟಿವೆ. ಅದೇ ರೀತಿ, ತಂತ್ರಜ್ಞಾನವೂ ಬೆಳೆದಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ತಂತ್ರಜ್ಞಾನದ ನೆರವಿನೊಂದಿಗೆ ಪರಿಹರಿಸಿಕೊಳ್ಳಬೇಕು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಗ್ಗೂಡಿ ಕಾರ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸುರಂಗ ಮಾರ್ಗ ನಿರ್ಮಾಣ ಹೊಸದಲ್ಲ. ಸುರಂಗ ಕೊರೆಯುವ ಯಂತ್ರಗಳು ಇಲ್ಲದಿದ್ದಾಗಲೂ ಕಾಮಗಾರಿಗಳು ನಡೆದಿವೆ. 1970ರಿಂದಲೂ ರಾಜ್ಯದಲ್ಲಿ ಸುರಂಗಗಳನ್ನು ನಿರ್ಮಿಸಲಾಗಿದೆ. ಆದರೆ, ಅಂದು ನೀರಾವರಿ ಮತ್ತಿತರ ಉದ್ದೇಶಗಳಿಗೆ ಸುರಂಗಗಳು ನಿರ್ಮಾಣಗೊಳ್ಳುತ್ತಿದ್ದವು. ಈಗ ಮಹಾನಗರಗಳ ದಟ್ಟಣೆ ಪ್ರದೇಶದಲ್ಲಿ ಮೆಟ್ರೊ ಮತ್ತು ಅನಿಲ ಸಂಪರ್ಕ ಸೇರಿದಂತೆ ಹಲವು ಉದ್ದೇಶಗಳಿಗೆ ಸುರಂಗ ನಿರ್ಮಿಸುವುದು ದೊಡ್ಡ ಸವಾಲಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಸುರಂಗ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರ ಪಾತ್ರ ದೊಡ್ಡದು. ಜೀವದ ಹಂಗು ತೊರೆದು ಅವರು ಕಾರ್ಯನಿರ್ವಹಿಸುತ್ತಾರೆ. ಕಾರ್ಮಿಕರು ನಿಜವಾದ ದೇಶದ ಆಸ್ತಿ. ಇವರ ಹಿತರಕ್ಷಣೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಸಮ್ಮೇಳನದಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ‌ ಪರ್ವೇಜ್, ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗರ್ಗ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.